ಬೆಳಗಾವಿ: ಗಡಿಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಪೋಷಿಸಿಕೊಂಡು ಹೋಗುವುದು ಅಗತ್ಯವಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಅನೇಕ ಕನ್ನಡಪರ ಸಂಘ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು. ಕನ್ನಡದ ಪ್ರೀತಿಯೇ ಇದಕ್ಕೆ ಕಾರಣ. ಸರ್ಕಾರ ಈ ಎಡೆಗೆ ಗಮನ ಹರಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸೋಮಶೇಖರ್ ಹೇಳಿದರು.
ಬೆಳಗಾವಿಯ ಕನ್ನಡ ಭವನದಲ್ಲಿ ಜರುಗಿದ ಬಿಎಸ್ ಗವಿಮಠ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನ ಕಾಲಘಟ್ಟದಲ್ಲಿ ಶರಣರ ಕನ್ನಡವನ್ನು ಕಟ್ಟುವ ಬೆಳೆಸುವ ಮಹತ್ವದ ಕಾರ್ಯ ಮಾಡಿದರು. ಅವರ ಕೊಡುಗೆ ಅನನ್ಯ. ಆ ಪರಂಪರೆ ಎಂದಿಗೂ ಅನವರತವಾಗಿ ಮುಂದುವರಿದುಕೊಂಡು ಬಂದಿದೆ. ಬಿಎಸ್ ಗವಿಮಠರ ಅಭಿಮಾನಿಗಳು ಸಾಹಿತ್ಯ ಪ್ರತಿಷ್ಠಾನವನ್ನು ಹುಟ್ಟುಹಾಕುವ ಮೂಲಕ ಕನ್ನಡ ಸಾಹಿತ್ಯಕ ಸಾಂಸ್ಕೃತಿಕ ಸೇವೆ ಗೈದ ಸಾಧಕರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯ. ಈ ಸಾಂಸ್ಕೃತಿಕ ಪ್ರತಿಷ್ಠಾನವು ರಚನಾತ್ಮಕ ಕೆಲಸ ಮಾಡುತ್ತ ಮತ್ತಷ್ಟು ವಿಸ್ತರಿಸಲಿ. ಗವಿಮಠರೂ ಎಸ್ ಡಿ ಇಂಚಲ ರಂತಹ ಮಹಾಕವಿಗಳನ್ನ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ. ಗಡಿಭಾಗದಲ್ಲಿರುವ ಕನ್ನಡ ಕೊಡುಗೆ ಅನನ್ಯ. ಇಂದು ಪ್ರತಿಷ್ಠಾನವು ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿಮಾನ ತಂದಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.
ವೈದ್ಯ ಡಾ. ಎಚ್ ಬಿ ರಾಜಶೇಖರ್ ಉದ್ಘಾಟಿಸಿ ಮಾತನಾಡಿ, ಗವಿಮಠರ ಸಾಂಸ್ಕೃತಿಕ ಮನಸ್ಸು ಬಹುದೊಡ್ಡದು. ಕವಿ ಎಚ್ ಡಿ ಇಂಚಲ್ ಹಾಗೂ ರಂಗ ಕಲಾವಿದರಾಗಿದ್ದ ಏಣಗಿ ಬಾಳಪ್ಪ ರಂತಹ ಮಹನೀಯರನ್ನು ಜೀವಂತವಾಗಿ ಉಳಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕೆಎಲ್ಇ ಸಂಸ್ಥೆಯ ಇತಿಹಾಸಕಾರರಾಗಿ ಅದರ ಸಾಂಸ್ಕೃತಿಕ ಕೊಡುಗೆ ದಾಖಲಿಸುವ ಮಹತ್ವದ ಕಾರ್ಯ ಮಾಡಿರುವ ಗವಿಮಠರ ಸೇವೆ ಶ್ಲಾಘನೀಯ. ಅವರ ಹೆಸರಿನ ಈ ಪ್ರತಿಷ್ಠಾನವು ಜನಪರವಾದಂತಹ ಕೆಲಸ ಕಾರ್ಯಗಳನ್ನು ನಿರಂತರವಾಗಿ ಗಡಿಭಾಗದಲ್ಲಿ ಮುಂದುವರಿಸಿಕೊಂಡು ಹೋಗಲಿ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಡಾ. ವಿ ಎಸ್ ಮಾಳಿ ಅಭಿನಂದನಪರ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಎಲ್ ವಿ ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು.
ವೈದ್ಯ ಡಾ. ದಯಾನಂದ ನೂಲಿ ಅವರಿಗೆ ಶರಣ ಸಾಹಿತ್ಯಸಿರಿ ಪ್ರಶಸ್ತಿ, ಡಾ ಗುರುದೇವಿ ಹುಲೆಪ್ಪನವರಮಠ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಜಾಕಿರ್ ನದಾಫ್ ಅವರಿಗೆ ರಂಗ ಚೇತನ ಪ್ರಶಸ್ತಿ , ಸಂತೋಷ ನಾಯಿಕ್ ಅವರಿಗೆ ಕಾವ್ಯ ಸಿರಿ ಪ್ರಶಸ್ತಿ ಗಳನ್ನು ಪ್ರತಿಷ್ಠಾನದಿಂದ ನೀಡಿ ಗೌರವಿಸಲಾಯಿತು.
ಡಾ ಅಶೋಕ ನರೋಡೆ ಅವರು ಸಂಪಾದಿಸಿದ ಡಾ.ಪ್ರಭಾಕರ ಕೋರೆಯವರ ಅಭಿನಂದನ ಗ್ರಂಥ ಸಮಾಜಭೂಷಣದ ದ್ವಿತೀಯ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು. ನಯನಾ ಗಿರಿಗೌಡರ್ ಪ್ರಾರ್ಥಿಸಿದರು. ಡಾ. ಪಿ.ಜಿ. ಕೆಂಪಣ್ಣವರ ಸ್ವಾಗತಿಸಿದರು. ಬಸವರಾಜ್ ಗಾರ್ಗಿ ನಿರೂಪಿಸಿದರು. ಅಕ್ಬರ್ ಸನದಿ ವಂದಿಸಿದರು.
ಬಿ ಎಸ್ ಗವಿಮಠ, ಡಾ. ಬಸವರಾಜ್ ಜಗಜಂಪಿ, ಎಂ ಎಸ್ ಇಂಚಲ ಡಾ ಅಶೋಕ್ ನರೋಡೆ, ಯ.ರು. ಪಾಟೀಲ್, ಏಣಗಿ ಸುಭಾಷ್, ಎಫ್ ವಿ ಮಾನ್ವಿ, ಡಾ ಎಂ ವಿ ಜಾಲಿ ಡಾ ಇಚ್ಚಂಗಿ, ಡಾ. ಸುಬ್ರಾವ ಎಂಟೆತ್ತಿನವರ ಬೆಂಗಳೂರಿನ ಕನ್ನಡ ಪರ ಹೋರಾಟಗಾರ ಪಾಲನೇತ್ರ , ಶಾಂತಾದೇವಿ ಹುಲೆಪ್ಪನವರಮಠ , ನೀಲಗಂಗಾ ಚರಂತಿಮಠ, ಡಿಎಸ್ ಚೌಗಲಾ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.