ಮಯೂರ್ಭಂಜ್ (ಒಡಿಶಾ) : ಅಪ್ರತಿಮ ನಿಷ್ಠೆ ಮತ್ತು ತ್ಯಾಗದ ಅಪರೂಪದ ನಿದರ್ಶನದಲ್ಲಿ ಬೀದಿ ನಾಯಿಯೊಂದು, ಶಾಲಾ ಮಕ್ಕಳನ್ನು ವಿಷಪೂರಿತ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಬಲಿಕೊಟ್ಟ ಹೃದಯ ಹಿಂಡುವ ಘಟನೆ ಒಡಿಶಾದ ಮಯೂರಭಂಜ್ ಜಿಲ್ಲೆಯ ಉದಲಾ ಬ್ಲಾಕ್ನ ಧೀರಕುಲ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೆಳಿಗ್ಗೆ ಸುಮಾರು 8:30ರ ಸಮಯದಲ್ಲಿ ಜಗನ್ನಾಥ ಶಿಶು ವಿದ್ಯಾ ಮಂದಿರದ 30ಕ್ಕೂ ಹೆಚ್ಚು ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ಶಾಲೆಯ ಹೊರಭಾಗದಲ್ಲಿ ಆಟವಾಡುತ್ತಿದ್ದಾಗ ಅತ್ಯಂತ ವಿಷಪೂರಿತ ಹಾವೊಂದು ಮಕ್ಕಳಿದ್ದ ಕಡೆ ಅಪಾಯಕಾರಿಯಾಗಿ ತೆವಳುತ್ತಾ ಬಂದಿದೆ. ಅಪಾಯವನ್ನು ತಕ್ಷಣವೇ ಗ್ರಹಿಸಿದ ‘ಕಾಳಿ’ ಹೆಸರಿನ ಬೀದಿ ನಾಯಿ ಕಿಂಚಿತ್ತೂ ತಡಮಾಡದೆ ಮಕ್ಕಳ ರಕ್ಷಣೆಗೆ ಧಾವಿಸಿ ಬಂದು ಹಾವಿನ ಮೇಲೆರಗಿದೆ.
ಹಾವು ಮಕ್ಕಳ ಹತ್ತಿರ ಸುಳಿಯದಂತೆ ತಡೆದ ಹೆಣ್ಣು ನಾಯಿ ಕಾಳಿ, ವಿಷಪೂರಿತ ಹಾವಿನ ಜೊತೆ ಭೀಕರವಾಗಿ ಹೋರಾಡಿತು. ಈ ಕಾಳಗದ ವೇಳೆ ಹಾವು ಕಾಳಿಯ ಬಾಯಿಗೆ ಪದೇ ಪದೇ ಕಚ್ಚಿದೆ. ಆದರೂ ಹಿಂದೆ ಸರಿಯದ ಕಾಳಿ ಹಾವನ್ನು ಕೊಂದು ಹಾಕುವ ಮೂಲಕ ಅಲ್ಲಿದ್ದ ಎಲ್ಲಾ ಮಕ್ಕಳೂ ಸುರಕ್ಷಿತವಾಗಿರುವಂತೆ ನೋಡಿಕೊಂಡಿದೆ.
ಆದರೆ ಹಾವಿನೊಂದಿಗಿನ ಹೋರಾಟದಲ್ಲಿ ಗೆದ್ದರೂ, ಹಾವಿನ ತೀಕ್ಷ್ಣವಾದ ವಿಷ ಕಾಳಿಯ ದೇಹ ಸೇರಿತ್ತು. ಬಾಯಿಗೆ ತೀವ್ರವಾಗಿ ಕಚ್ಚಿಸಿಕೊಂಡಿದ್ದರಿಂದ, ಕಾಳಿ ಸ್ವಲ್ಪ ಸಮಯದ ನಂತರ ದೇಹದಲ್ಲಿ ವಿಷ ವ್ಯಾಪಿಸಿ ಪ್ರಾಣ ಬಿಟ್ಟಿದೆ.
ತಮ್ಮ ಗ್ರಾಮದ ಪುಟ್ಟ ಮಕ್ಕಳ ಪ್ರಾಣ ಉಳಿಸಿದ ಕಾಳಿಯ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮವೇ ಕಂಬನಿ ಮಿಡಿಯಿತು. ಗ್ರಾಮಸ್ಥರೆಲ್ಲರಿಗೂ ಅಚ್ಚುಮೆಚ್ಚಿನ ನಾಯಿಯಾಗಿದ್ದ ಕಾಳಿಗೆ ಅಂತಿಮ ಗೌರವ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದರು. ಕಾಳಿಯ ಮೃತದೇಹವನ್ನು ಹೂವುಗಳಿಂದ ಅಲಂಕರಿಸಿ, ಬಟ್ಟೆಯಿಂದ ಹೊದಿಸಿ ಟ್ರಾಲಿಯ ಮೇಲೆ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ದು, ನಂತರ ಅಂತಿಮ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಯಿತು. “ಕಾಳಿ ನಮ್ಮ ಮಕ್ಕಳನ್ನು ಕಾಳಿ ಕಾಪಾಡಿದೆ. ಅದು ನಮ್ಮ ಹೃದಯದಲ್ಲಿ ಎಂದಿಗೂ ಅಮರ,” ಎಂದು ಗ್ರಾಮಸ್ಥರು ಭಾವುಕರಾಗಿ ನುಡಿದರು.
ತನ್ನ ಪ್ರಾಣವನ್ನು ಪಣಕ್ಕಿಟ್ಟು ಮುಗ್ಧ ಮಕ್ಕಳ ಜೀವ ಉಳಿಸಿದ ಕಾಳಿಯ ಈ ತ್ಯಾಗ ಮಯೂರಭಂಜ್ ಜಿಲ್ಲೆಯಾದ್ಯಂತ ಈಗ ಚರ್ಚೆಯ ವಿಷಯವಾಗಿದೆ.


