ಚೆನ್ನೈ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆಯನ್ನು (AIADMK) ಪ್ರಶ್ನಿಸುವ ಸಂದರ್ಭದಲ್ಲಿ ಖರ್ಗೆ ಈ ಹೇಳಿಕೆ ನೀಡಿದ್ದಾರೆ.
“ಅಣ್ಣಾದೊರೈ ಅವರ ಫೋಟೋ ಹಾಕಿಕೊಳ್ಳುವ ಎಐಎಡಿಎಂಕೆ ಜನರು ಮೋದಿ ಜೊತೆ ಹೇಗೆ ಕೈಜೋಡಿಸುತ್ತಾರೆ? ಅವರು ಒಬ್ಬ ಭಯೋತ್ಪಾದಕ. ಅವರ ಪಕ್ಷಕ್ಕೆ ಸಮಾನತೆ ಮತ್ತು ನ್ಯಾಯದ ಮೇಲೆ ನಂಬಿಕೆಯಿಲ್ಲ. ಅಣ್ಣಾದೊರೈ, ಕಾಮರಾಜ, ಪೆರಿಯಾರ್, ಕರುಣಾನಿಧಿ ಹಾಗೂ ಅಂಬೇಡ್ಕರ ಅವರ ಸಿದ್ಧಾಂತಗಳನ್ನು ಇವರು ದುರ್ಬಲಗೊಳಿಸುತ್ತಿದ್ದಾರೆ,” ಎಂದು ಖರ್ಗೆ ಕಿಡಿಕಾರಿದರು.
ಕಾಂಗ್ರೆಸ್-ಡಿಎಂಕೆ ಮೈತ್ರಿಯು ಜನಕಲ್ಯಾಣ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ನೀಡುವುದನ್ನು ಮುಂದುವರಿಸಲಿದೆ ಎಂದು ಅವರು ಒತ್ತಿ ಹೇಳಿದರು.
‘ಭಯೋತ್ಪಾದಕ’ ಪದದ ಬಗ್ಗೆ ಸ್ಪಷ್ಟನೆ ನೀಡಿದ ಖರ್ಗೆ
ಖರ್ಗೆ ಅವರ ಹೇಳಿಕೆ ಬಗ್ಗೆ ಪತ್ರಕರ್ತರು ವಿವರಣೆ ಕೇಳಿದಾಗ, ಅವರು ತಮ್ಮ ಮಾತನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು.
ಭಯೋತ್ಪಾದಕ ಎಂದಿಲ್ಲ: “ನಾನು ಅವರನ್ನು ಭಯೋತ್ಪಾದಕ ಎಂದು ಕರೆದಿಲ್ಲ. ಬದಲಿಗೆ ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ‘ಭಯಭೀತಗೊಳಿಸುತ್ತಿದ್ದಾರೆ’ (Terrorising) ಎಂಬುದು ನನ್ನ ಉದ್ದೇಶವಾಗಿತ್ತು,” ಎಂದು ಸ್ಪಷ್ಟಪಡಿಸಿದರು.
“ಇಡಿ (ED), ಐಟಿ (I-T) ಮತ್ತು ಸಿಬಿಐ (CBI) ನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಅವುಗಳನ್ನು ಬಳಸಿ ಅವರು ಎಲ್ಲರನ್ನೂ ಬೆದರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಆ ಪದ ಬಳಸಿದ್ದೇನೆಯೇ ಹೊರತು, ಅವರು ಭಯೋತ್ಪಾದಕ ಎಂದು ಹೇಳಿಲ್ಲ,” ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯ ಕೆಂಗಣ್ಣು: ‘ಅರ್ಬನ್ ನಕ್ಸಲ್’ ಎಂದು ಟೀಕೆ
ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ. ಬಿಜೆಪಿ ವಕ್ತಾರ ಪ್ರದೀಪ ಭಂಡಾರಿ ಮಾತನಾಡಿ, “ಕಾಂಗ್ರೆಸ್ ಒಂದು ‘ಅರ್ಬನ್ ನಕ್ಸಲ್’ ಪಕ್ಷ. ಕಾಂಗ್ರೆಸ್ ಪಕ್ಷದ ರಿಮೋಟ್ ಕಂಟ್ರೋಲ್ ದೇಶವಿರೋಧಿ ಶಕ್ತಿಗಳ ಕೈಯಲ್ಲಿದೆ ಎಂಬುದಕ್ಕೆ ಇಂತಹ ವಿಷಪೂರಿತ ಭಾಷೆಯೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಮತ್ತು ಎಂ.ಕೆ. ಸ್ಟಾಲಿನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಪ್ರಧಾನಿಯನ್ನು ಈ ರೀತಿ ಅವಮಾನಿಸುವುದು 140 ಕೋಟಿ ಭಾರತೀಯರಿಗೆ ಮತ್ತು 8 ಕೋಟಿ ತಮಿಳರಿಗೆ ಮಾಡಿದ ಅಪಮಾನ,” ಎಂದು ಅವರು ಹೇಳಿದ್ದಾರೆ.


