ಬೆಂಗಳೂರು : ಮಂಗಳವಾರ ನಡೆದ ಕ್ಷಿಪ್ರ
ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ನಾಯಕತ್ವ ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಡಿದೆ. 'ಪಕ್ಷ ಈಗಾಗಲೇ ನಿಮಗೆ ಅವಕಾಶ ನೀಡಿದ್ದು, ವಿಪಕ್ಷ ನಾಯಕರಾಗಿದ್ದೀರಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೀರಿ. ಈಗ ಬೇರೆಯವರಿಗೆ ಅವಕಾಶ ನೀಡುವ ಸಮಯ ಬಂದಿದೆ'. ರಾಜ್ಯಸಭಾ ಸದಸ್ಯರಾಗುವ ಆಫರ್ ನ್ನು ಸಹ ರಾಹುಲ್ ನೀಡಿದ್ದಾರೆ.
ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ಆಯೋಜಿಸಿದ್ದು, ಬಳಿಕ ಮಹತ್ವದ ಬೆಳವಣಿಗೆ ನಡೆಯಲಿದೆ.
ದೆಹಲಿಯಲ್ಲಿ ಇಡೀ ದಿನ ನಡೆದ ಸರಣಿ ಸಭೆಯ ಬಳಿಕ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದೆ ಎಂದು ಗೊತ್ತಾಗಿದೆ. ರಾತ್ರಿ ಎಂಟೂವರೆಗೆ ವಿಶೇಷ ವಿಮಾನದಲ್ಲಿ ಹೊರಟ ಸಿದ್ದರಾಮಯ್ಯ ಅವರು 11ರ ಸುಮಾರಿಗೆ ಬೆಂಗಳೂರಿಗೆ ತಲುಪಿದರು. ಮೇ 28 ರಂದು ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಂಭವ ಇದೆ ಎಂದು ಗೊತ್ತಾಗಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಒಪ್ಪಂದವಾಗಿತ್ತು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡಿದ್ದವು. ಅಧಿಕಾರಕ್ಕೆ ತ್ಯಾಗಕ್ಕೆ ಒಪ್ಪದ ಸಿದ್ದರಾಮಯ್ಯ ಅವರು, ತಮ್ಮದೇ ಚಾಣಾಕ್ಷ ನಡೆಯಿಂದ ತಮ್ಮ ಅಧಿಕಾರ ಅವಧಿಯನ್ನು ವಿಸ್ತರಿಸಿಕೊಂಡು ಬಂದಿದ್ದರು. ಕೊನೆಗೂ ಅವರನ್ನು ಕುರ್ಚಿಯಿಂದ ಇಳಿಸಲು ಹಾಗೂ ಪಕ್ಷ ಕಷ್ಟದಲ್ಲಿದ್ದಾಗ ಆಸರೆಯಾಗಿ ನಿಂತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧರಿಸಿದೆ.
ಹಾಗಿದ್ದರೂ, ಸಿದ್ದರಾಮಯ್ಯ ಅವರು ಪದತ್ಯಾಗ ಮಾಡಿದ ಬಳಿಕ ನಡೆಯಬಹುದಾದ ರಾಜಕೀಯ ವಿದ್ಯಮಾನ ಹಾಗೂ ಸ್ಥಿತ್ಯಂತರಗಳು ಸರ್ಕಾರದ ಮುಂದಿನ ನಾಯಕತ್ವ ಯಾರದ್ದು ಎಂಬುದನ್ನು ನಿರ್ಧರಿಸುವ ಸಾಧ್ಯತೆಯೂ ಇದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ 20ಕ್ಕೆ ಮೂರು ವರ್ಷ ಪೂರೈಸಿದೆ.
