ಬೆಳಗಾವಿ: ಇಂದಿನಿಂದ ಬೆಂಗಳೂರಿನಿಂದ ಬೆಳಗಾವಿಗೆ ದೇಶದ ಅತಿ ವೇಗದ ರೈಲು ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ. ಆದರೆ, ಇದರ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾಡುತ್ತಿರುವ ಹಾರಾಟ ಈಗ ನಗೆ ಪಾಟಲಿಗೆ ಗುರಿಯಾಗಿದೆ.
ಈ ಹಿಂದೆ ಬೆಂಗಳೂರು- ಹುಬ್ಬಳ್ಳಿಗೆ ಬರುತ್ತಿದ್ದ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಬೇಕು ಎಂಬ ಹೋರಾಟ ಜೋರಾಗಿತ್ತು. ಆಗ ಸಂಸದರಾಗಿದ್ದ ಮಂಗಲಾ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಈ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೆಲ ಕಾಲ ಈ ರೈಲು ಬೆಳಗಾವಿಗೆ ಬರುತ್ತಿತ್ತು. ನಂತರ ತಾಂತ್ರಿಕ ಕಾರಣ ನೀಡಿ ಅದನ್ನು ಕೇವಲ ಹುಬ್ಬಳ್ಳಿ- ಧಾರವಾಡಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು.
ನಂತರದ ದಿನಗಳಲ್ಲಿ ನಡೆದ ಬೆಳವಣಿಗೆಗಳಲ್ಲಿ ಈ ರೈಲನ್ನು ಬೆಳಗಾವಿಗೆ ಮತ್ತೆ ಆರಂಭಿಸಬೇಕು ಎಂದು ಇಲ್ಲಿನ ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಆದರೆ ಪ್ರಯತ್ನ ವಿಫಲವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಕೊನೆಗೂ ಇದಕ್ಕೆ ಸ್ಪಂದಿಸಿದ ಕೇಂದ್ರ ಸರಕಾರ ಬೆಳಗಾವಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭಿಸುವ ಘೋಷಣೆ ಮಾಡಿತ್ತು. ಇದೀಗ ಇಂದಿನಿಂದ ಬೆಳಗಾವಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ. ಆದರೆ, ಈ ರೈಲು ಆರಂಭಿಸಲು ತಾವೇ ಕಾರಣ ಎಂದು ಬೆಳಗಾವಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಕೇಂದ್ರದ ಪ್ರಭಾವಿ ಸಚಿವರು ಆಗಿರುವ ಪ್ರಹ್ಲಾದ ಜೋಶಿ ನೀಡಿರುವ ಪತ್ರಿಕಾ ಹೇಳಿಕೆಗಳು ಅತ್ಯಂತ ಹಾಸ್ಯಾಸ್ಪದವಾಗಿದೆ ಎನ್ನುವುದು ಬೆಳಗಾವಿ ಜನರ ಆಕ್ರೋಶದ ಮಾತುಗಳಾಗಿವೆ.
ಬೆಳಗಾವಿ-ಬೆಂಗಳೂರು ಸಂಚರಿಸುವ ಈ ರೈಲು ಸಂಚರಿಸುವ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರ ಅವರು ಈ ರೈಲು ಆರಂಭಕ್ಕೆ ತಾವೇ ಕಾರಣ ಎಂದು ಪೈಪೋಟಿಗೆ ಬಿದ್ದಂತೆ ಪತ್ರಿಕಾ ಹೇಳಿಕೆಗಳನ್ನು ನೀಡಿ ಜನರಿಗೆ ರಂಜನೆ ನೀಡಿದ್ದರು. ಆದರೆ, ಈ ಪ್ರಯತ್ನದ ಹಿಂದೆ ಬೆಳಗಾವಿ ಜಿಲ್ಲೆಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶಕ್ತಿಮೀರಿ ಪ್ರಯತ್ನಿಸಿದ್ದನ್ನು ಜಿಲ್ಲೆಯ ಜನ ಮರೆಯಲು ಸಾಧ್ಯವಿಲ್ಲ. ಜಗದೀಶ ಶೆಟ್ಟರ ಅವರು ಸಂಸದರಾಗಿ ಒಂದೂವರೆ ವರ್ಷ ಪೂರ್ಣಗೊಂಡಿದೆ. ಆದರೆ, ಈ ಅವಧಿಯಲ್ಲಿ ಅವರಿಂದ ಬೆಳಗಾವಿ ಜಿಲ್ಲೆಗೆ ಕೇಳಿಕೊಳ್ಳುವಂತ ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ. ಬೆಳಗಾವಿ ಜಿಲ್ಲೆಯವರನ್ನೇ ಸಂಸದರಾಗಿ ಆಯ್ಕೆ ಮಾಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎನ್ನುವುದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.