ಬೆಳಗಾವಿ : ಬೆಳಗಾವಿಯ ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಮ್ಮೆಯ ಸಂಗತಿ. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಅವರನ್ನು ಕೇಂದ್ರ ಸರ್ಕಾರ ರಾಜ್ಯಪಾಲರನ್ನಾಗಿ ನೇಮಿಸಬೇಕು’ ಎಂದು ಶ್ರೀಶೈಲ-ಯಡೂರಿನ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಂಕಲಿ ಗ್ರಾಮದ ಶಾರದಾದೇವಿ ಕೋರೆ ಪಿಯು ಕಾಲೇಜಿನ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಭಾಕರ ಕೋರೆ ಅವರ 79ನೇ ಜನ್ಮದಿನ ಹಾಗೂ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
80 ದಶಕಗಳನ್ನು ಕಂಡಿರುವ ಪ್ರಭಾಕರ ಕೋರೆ ಅವರಿಗೆ ಇನ್ನೂ ಹೆಚ್ಚಿನ ಸ್ಥಾನ ಮಾನ ದೊರೆಯಬೇಕು’ ಎಂದರು.
ಬೆಳಗಾವಿ ಸಂಸದ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಕೆಎಲ್ಇ ಸಂಸ್ಥೆಯು ಅಧಿವೇಶನ ನಡೆಸಲು ಅವಕಾಶ ನೀಡಿದ್ದರಿಂದಲೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಸಾಧ್ಯವಾಗಿದೆ. ಬೆಳಗಾವಿಯೂ ಬೆಂಗಳೂರಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಬೇಕು. ಬೆಂಗಳೂರಿನಲ್ಲಿ ದೊರೆಯುವ ಮೂಲ ಸೌಲಭ್ಯಗಳು ಬೆಳಗಾವಿಯಲ್ಲಿ ಇಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಕೊರತೆ ಎದ್ದು ಕಾಣುತ್ತಿದೆ ಎಂದರು.
ಡಾ.ಪ್ರಭಾಕರ ಕೋರೆ ಮಾತನಾಡಿ, ಸಾಧನೆಗೆ ಕೊನೆ ಎಂಬುವುದಿಲ್ಲ. ನಾಲ್ಕು ಜನಕ್ಕೆ ಒಳ್ಳೆಯ ಕೆಲಸ ಮಾಡಿದಾಗಲೇ ಜೀವನ ಸಾರ್ಥಕ ಎಣಿಸುತ್ತದೆ ಎಂದು ಹೇಳಿದರು.
ಚಿಕ್ಕೋಡಿಯ ಸಿ.ಬಿ. ಕೋರೆ ಸಹಕಾರ ಸಕ್ಕರೆ ಕಾರ್ಖಾನೆ, ಸವದತ್ತಿಯ ಶಿವಶಕ್ತಿ ಶುಗರ್ಸ್ ಲಿ, ಯಡ್ರಾಂವನ ಹರ್ಮ್ಸ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್, ಅಂಕಲಿಯ ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿ, ಮರಕುಂಬಿಯ ಇನಾಮದಾರ ಶುಗರ್ಸ್ ಮತ್ತು ಕೆಎಲ್ಇ ಸಂಸ್ಥೆಯ ಅಂಗಸಂಸ್ಥೆಗಳು, ಚಿಕ್ಕೋಡಿಯ ಜನಶಕ್ತಿ ಫೌಂಡೇಷನ್, ಕೆಎಲ್ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ, ಚಿಕ್ಕೋಡಿ ಸಹಯೋಗದಲ್ಲಿ 79ನೇ ಜನ್ಮದಿನ ಕಾರ್ಯಕ್ರಮದ ಪ್ರಯುಕ್ತ ವನಮಹೋತ್ಸವ, ರಕ್ತದಾನ ಶಿಬಿರ, ಸಂಗೀತ ಕಾರ್ಯಕ್ರಮ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ ಕೋರೆ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ಅಮರಸಿಂಹ ಪಾಟೀಲ, ಆಶಾದೇವಿ ಕೋರೆ, ಕೆಎಲ್ಇ ಸಂಸ್ಥೆಯ ನಿರ್ದೇಶಕಿ ಪ್ರೀತಿ ದೊಡವಾಡ, ವೀರಕುಮಾರ ಪಾಟೀಲ, ಶ್ಯಾಮ ಘಾಟಗೆ, ಕಲ್ಲಪ್ಪ ಮಗೆಣ್ಣವರ, ಅನಿಲ ಬೆನಕರೆ, ಮಹಾಂತೇಶ ದೊಡ್ಡಗೌಡರ, ಮಲ್ಲಿಕಾರ್ಜುನ ಕೋರೆ, ಬಿ.ಆರ್. ಪಾಟೀಲ, ಭರತೇಶ ಬನವಣೆ, ಅಜೀತಸಿಂಹ ನಿಂಬಾಳಕರ, ಮಹೇಶ ಕುಮಟಳ್ಳಿ, ದೇವೇಂದ್ರ ಕರೋಶಿ ಉಪಸ್ಥಿತರಿದ್ದರು.
ಗೋಕಾಕ: ಕೆ.ಎಲ್.ಇ. ಸಂಸ್ಥೆ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಲು ಡಾ.ಪ್ರಭಾಕರ ಕೋರೆ ಅವರ ಪಾತ್ರ ಮಹತ್ವದ್ದಾಗಿದೆ’ ಎಂದು ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಕೆ.ಎಲ್.ಇ. ಸಂಸ್ಥೆಯ ಇಲ್ಲಿನ ಸಿ.ಎಸ್.ಅಂಗಡಿ ಪ.ಪೂ. ಕಾಲೇಜಿನ ಆವರಣದಲ್ಲಿ ವಿವಿಧ ಅಂಗ-ಸಂಸ್ಥೆಗಳ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಪ್ರಭಾಕರ ಕೋರೆ ಜನ್ಮದಿನದಿನದ ಪ್ರಯುಕ್ತ ನಶಮುಕ್ತ ಭಾರತ, ಅಂಗಾಂಗ ದಾನ ಅಭಿಯಾನ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷೆ ರೂಪಾ ಮುನವಳ್ಳಿ, ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ಓಂಪ್ರಕಾಶ ಅಂಗಡಿ, ಸುನಂದ ಅಂಗಡಿ, ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಜಿ.ಎಂ.ಅಂದಾನಿ, ಸ್ಥಳೀಯ ಕೆ.ಎಲ್.ಇ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಡಿ.ಎಚ್.ಚೌಗಲಾ, ಅನುಪಾ ಕೌಶಿಕ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್, ಲಯನ್ಸ್ ಸಂಸ್ಥೆಯ ಶಂಕರ ದೊಡ್ಡಮನಿ, ಶಹರ ಪೊಲೀಸ್ ಠಾಣೆಯ ಎಸ್.ಐ. ಗೌರಿಶಂಕರ ಎಂ.ಎನ್. ಇದ್ದರು.