ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಹಿಂದಿ ಸಾಹಿತ್ಯದ ಮಹಾನ್ ಕಾದಂಬರಿಕಾರ ಹಾಗೂ ವಾಸ್ತವವಾದಿ ಲೇಖಕ ಮುಂಶಿ ಪ್ರೇಮಚಂದ್ ಅವರ ಜಯಂತಿಯನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಅವರು ಮುಂಶಿ ಪ್ರೇಮಚಂದ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು. ಅವರು, ಪ್ರೇಮಚಂದ್ ಅವರ ಸಾಹಿತ್ಯವು ಸಮಾಜದ ನೈಜ ಚಿತ್ರಣವನ್ನು ಬಿಂಬಿಸುವುದರ ಜೊತೆಗೆ ಮಾನವೀಯ ಮೌಲ್ಯಗಳು, ಸಾಮಾಜಿಕ ಸಮಾನತೆ ಹಾಗೂ ರಾಷ್ಟ್ರಪ್ರೇಮದ ಸಂದೇಶವನ್ನು ಸಾರುತ್ತದೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು.
ಶಿಕ್ಷಣವು ಕೇವಲ ಪದವಿಗಳಿಸುವ ಸಾಧನವಲ್ಲ; ಉತ್ತಮ ನಡತೆ, ಸಂಸ್ಕಾರ ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಮಹತ್ತರ ಸಾಧನವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ. ಎಂ. ಎಂ. ಮುತವಳ್ಳಿ ಮಾತನಾಡಿ, ಮುಂಶಿ ಪ್ರೇಮಚಂದ್ ಅವರ ಜೀವನ, ಸಾಹಿತ್ಯಿಕ ಸಾಧನೆ ಹಾಗೂ ವಾಸ್ತವವಾದಿ ಬರವಣಿಗೆಯ ವೈಶಿಷ್ಟ್ಯವನ್ನು ವಿವರಿಸಿದರು.
ಹಿಂದಿ ವಿಭಾಗದ ವಿದ್ಯಾರ್ಥಿಗಳು ಪ್ರೇಮಚಂದ್ ಅವರ ಕಾದಂಬರಿಗಳು, ಕಥೆಗಳು, ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಹಿಂದಿ ವಿಭಾಗದ ಉಪನ್ಯಾಸಕಿ ಡಾ. ದೀಪಾ ಅಂಟಿನ್ ಅವರು ಪರಿಚಯಿಸಿ, ಸ್ವಾಗತಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಉಜ್ವಲಾ ಪಾಟೀಲ ಅವರು ವಂದಿಸಿದರು. ವಿದ್ಯಾರ್ಥಿನಿ ನೇತ್ರಾ ನಿರೂಪಿಸಿದರು.