ಬೆಂಗಳೂರು : ಧರ್ಮಸ್ಥಳ ಪ್ರಕರಣದ ಕುರಿತು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಬಂಧಿಸಿ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಮಾಸ್ಕ್ ಮ್ಯಾನ್ ಒಬ್ಬ ಇಡೀ ಸರ್ಕಾರಿ ಯಂತ್ರವನ್ನು ಒಂದು ತಿಂಗಳ ಕಾಲ ಮೋಸಗೊಳಿಸಿದ್ದಾನೆ. ಸನಾತನ ಧರ್ಮದ ಕೇಂದ್ರ ಧರ್ಮಸ್ಥಳ ದೇಗುಲವನ್ನು ಅಪವಿತ್ರಗೊಳಿಸುವ ಪಿತೂರಿಯ ಭಾಗವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿ ಮಾಡಿದ್ದಲ್ಲ, ಆತನ ಹಿಂದೆ ದೊಡ್ಡ ವ್ಯವಸ್ಥೆಯೇ ಇದೆ. ಈಗ ಒಬ್ಬನ ಮುಖವಾಡ ಮಾತ್ರ ಬಯಲಾಗಿದ್ದು ದೊಡ್ಡ ಷಡ್ಯಂತ್ರದ ಅಸಲಿ ಮುಖ ಬಯಲಾಗಬೇಕಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
1994 ಮತ್ತು 2014 ರ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದರಿಂದ ಈ ವಿವಾದ ಉಂಟಾಗಿತ್ತು.
'ಒಬ್ಬ ಮುಖವಾಡ ಧರಿಸಿದ ವ್ಯಕ್ತಿ ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕ ರಾಜ್ಯದ ಸಂಪೂರ್ಣ ಸರ್ಕಾರಿ ಯಂತ್ರವನ್ನು ಹಗುರವಾಗಿ ಬಳಸಿಕೊಂಡಿದ್ದಾನೆ. ಇದು ಕೇವಲ ಒಬ್ಬ ವ್ಯಕ್ತಿ ಮಾಡಿಲ್ಲ, ಬದಲಾಗಿ ಬಹುದೊಡ್ಡ ಪಿತೂರಿಯ ಭಾಗವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಆಧಾರರಹಿತ ಮುಖವಾಡ ಧರಿಸಿದ ವ್ಯಕ್ತಿಯ ಆರೋಪಗಳಿಗೆ ಪ್ರಾಥಮಿಕ ಪುರಾವೆಗಳಿಲ್ಲದೆಯೇ ಕಾನೂನುಬದ್ಧತೆಯನ್ನು ನೀಡಿದ್ದು ಮೂರ್ಖತನ ಎಂದು ಅವರು ಲೇವಡಿ ಮಾಡಿದ್ದಾರೆ.