ಬಳ್ಳಾರಿ: ಭಾರತೀಯ ಪತ್ರಕರ್ತರ ಸಂಘ ನವದೆಹಲಿ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಇವರ ಸಯುಕ್ತಾಶ್ರಯದಲ್ಲಿ ಫೆ. 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಬಳ್ಳಾರಿಯ ಗಾಂಧಿನಗರದಲ್ಲಿರುವ ನಕ್ಷತ್ರ ಹೋಟೆಲ್ ನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಪತ್ರಕರ್ತರು ಆಗಮಿಸಲಿದ್ದಾರೆ.
19 ರಂದು ಮಧ್ಯಾಹ್ನ 2:00 ಕ್ಕೆ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ಬಳ್ಳಾರಿಯ ಕಲ್ಯಾಣ ಸಂಸ್ಥಾನ ಮಠದ ಶ್ರೀ ಕಲ್ಯಾಣ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹಾಗೂ ಭಾರತೀಯ ಪತ್ರಕರ್ತರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಮುರುಗೇಶ್ ಶಿವಪೂಜಿ ವಹಿಸಲಿದ್ದಾರೆ.
ಬಳ್ಳಾರಿ ನಗರದ ಮಹಾನಗರ ಪಾಲಿಕೆ ಆಯುಕ್ತ ಪಿ. ಗಾದೆಪ್ಪ, ಮಾಜಿ ಸಚಿವ ಶ್ರೀರಾಮುಲು, ಬಳ್ಳಾರಿ ವಲಯದ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ , ಗೋಕಾಕದ ಬಸವ ಪಿರಾಮಿಡ್ ಹಾಗೂ ಮನಸ್ಸಾಕ್ಷಿ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ಕರ್ಜಗಿ ಮಠ, ವಚನಾ ಟಿವಿ ಮಾಧ್ಯಮದ ಸಿದ್ದು ಯಾಪಲಪರವಿ ಆಗಮಿಸಲಿದ್ದಾರೆ.
ಸಂಜೆ 5:30 ರಿಂದ 6:30ವರೆಗೆ ಜರುಗುವ ಸೆಮಿನಾರ್ ಕಾರ್ಯಕ್ರಮಗಳಲ್ಲಿ ಮೈಸೂರಿನ ಹಿರಿಯ ಪತ್ರಕರ್ತ ಜಗದೀಶ ಕೊಪ್ಪ, ರಾಣೆಬೆನ್ನೂರಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಅಶೋಕ ಹಳ್ಳಿಯವರ, ಕಾರವಾರದ ವಿಜಯ ಕರ್ನಾಟಕದ ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ ಪ್ರಮೋದ ಹರಿಕಾಂತ, ಗೋಕಾಕದ ಮನಸಾಕ್ಷಿ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ಕರಜಗಿಮಠ, ರಾಯಬಾಗದ ಹಿರಿಯ ಪತ್ರಕರ್ತ ವಸಂತ ಹೊಸಮನಿ, ನಮ್ಮೂರು ಬಾನುಲಿ ರೇಡಿಯೋದ ಕಿರಣ ಚೌಗಲಾ ಭಾಗವಹಿಸುವರು.
20 ರಂದು ಮುಂಜಾನೆ 10.00 ಗಂಟೆಗೆ ರಾಷ್ಟ್ರಮಟ್ಟದ ಸಮ್ಮೇಳನ ಜರುಗಲಿದ್ದು ಸಮ್ಮೇಳನದ ಸಾನ್ನಿಧ್ಯವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮ ಪ್ರಭು ಸ್ವಾಮೀಜಿ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಟ್ರಸ್ಟ್) ಗೌರವಾಧ್ಯಕ್ಷರು ಭಾಗವಹಿಸಲಿದ್ದಾರೆ.
ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆ.ಬಿ ಪಂಡಿತ ಅಧ್ಯಕ್ಷರು ಭಾರತೀಯ ಪತ್ರಕರ್ತರ ಸಂಘ ನವದೆಹಲಿ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ವಸತಿ, ವಕ್ಫ್, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಬಳ್ಳಾರಿಯ ಲೋಕಸಭಾ ಸಂಸದ ಈ. ತುಕಾರಾಮ, ಬಳ್ಳಾರಿ ನಗರದ ಶಾಸಕ ನಾ.ರಾ.ಭರತ್ ರೆಡ್ಡಿ, ಕಂಪ್ಲಿ ವಿಧಾನಸಭಾ ಮತಕ್ಷೇತ್ರದ ಶಾಸಕ ಜೆ.ಎನ್ ಗಣೇಶ, ಬಿಹಾರದ ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗಡೆ ಮುಂತಾದವರು ಆಗಮಿಸಲಿದ್ದಾರೆ. ಅದೇ ದಿನದಂದು ನಡೆಯುವ ಸೆಮಿನಾರ್ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಮಟ್ಟು, ಪಾಂಡಿಚೇರಿಯ ಹಿರಿಯ ಪತ್ರಕರ್ತ ದೊರೈಸ್ವಾಮಿ, ಹರಿಯಾನದ ಹಿರಿಯ ಪತ್ರಕರ್ತ ವಿನೋದ ಪಂಚಾಲ, ಬಿಹಾರದ ಹಿರಿಯ ಪತ್ರಕರ್ತ ಜಯಪ್ರಕಾಶ ಸಿಂಗ್, ಒರಿಸ್ಸಾದ ಹಿರಿಯ ಪತ್ರಕರ್ತ ಪರಮಾನಂದ ಮಿಶ್ರಾ, ಅಸ್ಸಾಂ ನ ಹಿರಿಯ ಪತ್ರಕರ್ತ ಆಸಿಂ ಚೌಧರಿ, ದಿ ಹಿಂದೂ ದಿನಪತ್ರಿಕೆಯ ಡೆಪ್ಯುಟಿ ಎಡಿಟರ್ ಗಿರೀಶ ಪಟ್ಟಣಶೆಟ್ಟಿ, ಗೋವಾ ರಾಜ್ಯ ಸರ್ಕಾರದ ಮಾಹಿತಿ ಅಧಿಕಾರಿ ಕಿರಣ ಮುನ್ನಾಕರ, ಬಿಹಾರದ ದೈನಿಕ ಭಾಸ್ಕರ ಪತ್ರಕರ್ತ ನವೀನ ಕುಮಾರ ಆಗಮಿಸಲಿದ್ದಾರೆ.
ಫೆ.21 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು. ಮೂರು ದಿನಗಳ ಕಾಲ ಜರುಗುವ ಸಮ್ಮೇಳನದಲ್ಲಿ ಮನರಂಜನಾ ಕಾರ್ಯಕ್ರಮಗಳು, ಸಂವಾದ ಗೋಷ್ಠಿ, ಪತ್ರಕರ್ತರ ಸಮಸ್ಯೆಗಳು ಚರ್ಚೆಯಾಗಲಿವೆ.
ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಯಾಲ್ಪಿ ಭಾಷಾ, ಉಪಾಧ್ಯಕ್ಷ ಸುಧೀಶ ಕುಮಾರ ,ಕೆ .ಭಜರಪ್ಪ, ಗಿರೀಶ್ ಕುಮಾರ ಗೌಡ, ವೀರಭದ್ರಗೌಡ, ಕೋಶಾಧಿಕಾರಿ ಬಿ.ಪಂಪನಗೌಡ, ಪ್ರಧಾನ ಕಾರ್ಯದರ್ಶಿ ದುರ್ಗೇಶ ಯಾದವ, ಸಂಪತ್ ಕುಮಾರ್ ಮುಚಳಂಬಿ, ಗೋಪಾಲ ಸಂಡೂರು, ಶರಣಪ್ಪ ರ್ಯಾವನಕಿ, ದತ್ತಾತ್ರೇಯ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು.


