ಬೆಳಗಾವಿ: ಸವದತ್ತಿ ತಾಲೂಕಿನ ಚಿಕ್ಕಬುದನೂರ ಗ್ರಾಮದ ಸಮೀಪದ ಲಕ್ಷ್ಮೀದೇವರ ಗುಡಿಯಲ್ಲಿ ರಕ್ತದೋಕುಳಿ ಹರಿದಿದೆ.
ಮೊಬೈಲ್ ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಸಣ್ಣ ಜಗಳ ಸ್ನೇಹಿತನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಬುದನೂರ ಗ್ರಾಮದ ನಿವಾಸಿ ಪಕೀರಪ್ಪ ಮಲ್ಲಪ್ಪ ಪಿಡ್ಡೆನ್ನವರ (40) ಕೊಲೆಯಾದ ವ್ಯಕ್ತಿ. ಮೃತ ಪಕೀರಪ್ಪ ಹಾಗೂ ಆರೋಪಿ ಮಲ್ಲಿಕಾರ್ಜುನ (25. ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ ತನ್ನ ಮೊಬೈಲ್ ಅನ್ನು ಪಕೀರಪ್ಪನಿಗೆ ನೀಡಿದ್ದ. ಅದನ್ನು ವಾಪಸ್ ಪಡೆಯುವ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಶುಕ್ರವಾರ ಸಂಜೆ ಪಕೀರಪ್ಪ ಲಕ್ಷ್ಮೀದೇವರ ಗುಡಿಯ ಛಾವಣಿಯಲ್ಲಿ ಮಲಗಿದ್ದ ವೇಳೆ ಅಲ್ಲಿಗೆ ಬಂದ ಮಲ್ಲಿಕಾರ್ಜುನ ಮೊಬೈಲ್ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಪಕೀರಪ್ಪ “ರಾತ್ರಿ ಕೊಡುತ್ತೇನೆ” ಎಂದು ಹೇಳಿದ್ದನು.
ಇದರಿಂದ ಕೋಪೋದ್ರಿಕ್ತನಾದ ಆರೋಪಿ, ಗುಡಿಯಲ್ಲಿದ್ದ ಅಂಗಾರ ಇಡುವ ಭಾರವಾದ ಕಲ್ಲನ್ನು ಎತ್ತಿ ಪಕೀರಪ್ಪನ ತಲೆಯ ಮೇಲೆ ಬಲವಾಗಿ ಎಸೆದಿದ್ದಾನೆ. ತಲೆಗೆ ತೀವ್ರ ಪೆಟ್ಟಾದ ಪಕೀರಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುರಗೋಡ ಠಾಣೆ ಪೊಲೀಸರು, ರಾಮದುರ್ಗ ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಮಾಹಿತಿ ಸಂಗ್ರಹಿಸಿದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಬುದನೂರ ಗ್ರಾಮದ ಮಲ್ಲಿಕಾರ್ಜುನ ಸಿದ್ದಪ್ಪ ಪೂಜೇರಿ ಎಂಬಾತನನ್ನು ಮುರಗೋಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ವ್ಯಕ್ತಿಯ ಮೃತ ದೇಹ ಬೆಳಗಾವಿಯ ಬಿಮ್ಸ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಬಂಸ್ಥರಿಗೆ ಹಸ್ತಾಂತರಿಸಲಾಗಿದೆ.