ನಾಗಪುರ : ವಿಚಿತ್ರ ಕಳ್ಳತನದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನಕ್ಕೂ ಮುನ್ನ ದೇವರ ಮುಂದೆ ಕ್ಷಮೆ ಕೋರಿ ಇಬ್ಬರು ಅಪರಿಚಿತರು ಬಳಿಕ ದೇವಾಲಯಗಳ ಹುಂಡಿಗಳನ್ನು ಒಡೆದು ಹಣ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಈ ಕಳ್ಳತನವು ನಾಗಪುರದ ಮಾಲ್ಧಕ್ಕಾ ಪ್ರದೇಶದಲ್ಲಿರುವ ಶೀತ್ಲಾ ಮಾತಾ ದೇವಾಲಯ ಹಾಗೂ ಶಿವ ದೇವಾಲಯಗಳಲ್ಲಿ ನಡೆದಿದೆ. ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಜುಲೈ 27ರ ಸಂಜೆ ದೇವಾಲಯದ ಬಾಗಿಲುಗಳನ್ನು ಬೀಗ ಹಾಕಿ ತೆರಳಿದ್ದರು. ಆದರೆ ಮರುದಿನ ಬೆಳಗ್ಗೆ ದೇವಾಲಯಕ್ಕೆ ಬಂದಾಗ ಮುಖ್ಯ ದ್ವಾರದ ಬೀಗ ಮುರಿದಿರುವುದು ಕಂಡುಬಂದಿದೆ.
ಅವರು ಒಳಗೆ ಪ್ರವೇಶಿಸಿದಾಗ ಎರಡೂ ದೇವಾಲಯಗಳ ಹುಂಡಿಗಳ ಬೀಗಗಳನ್ನು ಒಡೆದು, ಅದರಲ್ಲಿದ್ದ ನಗದನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
ನಂತರ ದೇವಾಲಯದ ಒಳಗಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ರಾತ್ರಿ ವೇಳೆ ಇಬ್ಬರು ಅಪರಿಚಿತರು ದೇವಾಲಯದೊಳಗೆ ಪ್ರವೇಶಿಸಿರುವುದು ದಾಖಲಾಗಿದೆ. ವಿಚಿತ್ರವೆಂದರೆ ಕಳ್ಳತನ ನಡೆಸುವ ಮೊದಲು ಆರೋಪಿಗಳಲ್ಲಿ ಒಬ್ಬಾತ ದೇವರ ಎದುರು ಕೈಮುಗಿದು, ಕಿವಿ ಹಿಡಿದು ಕ್ಷಮೆ ಯಾಚಿಸಿದ್ದಾನೆ. ಅದೇ ಸಮಯದಲ್ಲಿ ಆತನ ಸಹಚರ ಹುಂಡಿಯ ಬೀಗ ಮುರಿದಿದ್ದಾನೆ.ʼ
ಮತ್ತೊಬ್ಬ ಸುತ್ತಮುತ್ತ ಯಾರಾದರೂ ಬರುತ್ತಿದ್ದಾರೆಯೇ ಎಂದು ನಿಂತು ನೋಡುತ್ತಿದ್ದಾನೆ. ಬಳಿಕ ಇಬ್ಬರೂ ಹುಂಡಿಗಳ ಬೀಗಗಳನ್ನು ಒಡೆದು, ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಅಂದಾಜು ₹6,000 ರಿಂದ ₹7,000 ನಗದನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ದೇವಾಲಯದ ಆಡಳಿತ ಮಂಡಳಿಯವರು ನೀಡಿದ ದೂರಿನ ಆಧಾರದ ಮೇಲೆ ಲಕಡ್ಗಂಜ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.