ಬೆಂಗಳೂರು : ರಾಜ್ಯದ ಜನತೆಗೆ ಹವಾಮಾನ ಇಲಾಖೆ (IMD) ಮಹತ್ವದ ಮುನ್ಸೂಚನೆಯನ್ನು ನೀಡಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ, ಗುಡುಗು ಸಹಿತ ಬಿರುಗಾಳಿ ಹಾಗೂ ಆಲಿಕಲ್ಲು ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಹವಾಮಾನ ಬದಲಾವಣೆ ಕಂಡುಬರಲಿದ್ದು, ಮೇ 3ರ ವರೆಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ತುಮಕೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.
ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಬಹುದು ಹಾಗೂ ಬಲವಾದ ಗಾಳಿ ಬೀಸುವ ಕುರಿತು ಐಎಂಡಿ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆವೆಂದು ಹೇಳಿದೆ.
ಮೇ 1: ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಲಿದ್ದರೂ, ಬೆಂಗಳೂರು, ತುಮಕೂರು ಮತ್ತು ಚಿತ್ರದುರ್ಗ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಭಾಗಗಳು ಕ್ರಮೇಣ ಒಣಹವೆಯತ್ತ ಮರಳಲಿವೆ.
ಮೇ 2: ಮೈಸೂರು, ಮಂಡ್ಯ, ಕೊಡಗು, ರಾಮನಗರ ಮತ್ತು ಬೆಂಗಳೂರಿಗೆ ಮಾತ್ರ ಮಳೆ ಸೀಮಿತವಾಗಲಿದೆ. ಉಳಿದ ಭಾಗಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ಬರಲಿದೆ.
ಮೇ 3: ಈ ಮಳೆಯ ಅವಧಿಯ ಅಂತ್ಯದ ಮುನ್ಸೂಚನೆಯಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕೊಡಗಿನ ಕೆಲವು ಕಡೆಗಳಲ್ಲಿ ಮಾತ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಹೊಸ ಮಳೆ ಮಾದರಿಯ ಪತ್ತೆ
ಸ್ವತಂತ್ರ ಹವಾಮಾನ ವಿಶ್ಲೇಷಕ ಸಂಸ್ಥೆ ‘ನಮ್ಮ ಕರ್ನಾಟಕ ವೆದರ್’ ಪ್ರಕಾರ, ತಿರುಪತಿಯಿಂದ ಸತ್ಯಮಂಗಲದವರೆಗೆ ಮೋಡಗಳ ಚಟುವಟಿಕೆ ಹೆಚ್ಚುತ್ತಿದೆ. ಈ ಪಟ್ಟಿಯಲ್ಲಿ ಹೊಸ ಮಳೆ ಮಾದರಿಯು ಬಲಗೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಮೇ 4ರವರೆಗೆ ಅಸ್ಥಿರ ಹವಾಮಾನ ಮುಂದುವರಿಯಲಿದೆ. ಮೇ 1 ರಿಂದ ಮೇ 4 ರವರೆಗೆ ಭಾಗಶಃ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಹಗಲಿನಲ್ಲಿ 35-36°C ಹಾಗೂ ರಾತ್ರಿಯ ವೇಳೆಯಲ್ಲಿ 21-23°C ತಾಪಮಾನವಿರಲಿದೆ ಎಂದು ಹೇಳಲಾಗಿದೆ.