ಬೆಳಗಾವಿ : ಹನ್ನೆರಡನೇ ಶತಮಾನದ ಶರಣರ ವಚನಗಳು ಕೇವಲ ಧಾರ್ಮಿಕ ವಿಚಾರಗಳಲ್ಲ; ಅವು ಆತ್ಮಶೋಧನೆ, ಜೀವನ ಮೌಲ್ಯ ಮತ್ತು ಶಿವಯೋಗದ ಅನುಭಾವವನ್ನು ತಿಳಿಸುವ ಜ್ಞಾನಧಾರೆಗಳಾಗಿವೆ. ಇಷ್ಟಲಿಂಗದ ಆರಾಧನೆ, ಕಾಯಕ–ದಾಸೋಹ, ಆತ್ಮಾವಲೋಕನ ಹಾಗೂ ಲಿಂಗಾಂಗ ಸಾಮರಸ್ಯದ ಮೂಲಕ ಮನುಷ್ಯನು ಆತ್ಮಸಿದ್ಧಿಯತ್ತ ಸಾಗಬಹುದು ಎಂದು ಹನ್ನಿಕೇರಿ ಸರಕಾರಿ ಶಾಲೆಯ ಶಿಕ್ಷಕ ಮಂಜುನಾಥ ಮಡಿವಾಳರ ಹೇಳಿದರು.
ನಗರದ ಶಿವಬಸವನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ವಚನಗಳಲ್ಲಿ ಶಿವಯೋಗ’ ವಿಷಯ ಕುರಿತು ಅವರು ಮಾತನಾಡಿದರು.
ಶರಣರ ದೃಷ್ಟಿಯಲ್ಲಿ ಶಿವಯೋಗವೆಂದರೆ ಕೇವಲ ಪೂಜೆ, ಧ್ಯಾನ ಅಥವಾ ಆಚರಣೆಗೆ ಸೀಮಿತವಾದುದಲ್ಲ. ಮನಸ್ಸು, ವಚನ ಮತ್ತು ಕಾಯಕಗಳನ್ನು ಶುದ್ಧಗೊಳಿಸಿಕೊಂಡು, ಇಷ್ಟಲಿಂಗದ ಮೂಲಕ ಪರಮಾತ್ಮನೊಂದಿಗೆ ಆಂತರಿಕ ಸಂಬಂಧವನ್ನು ಬೆಳೆಸಿಕೊಳ್ಳುವುದೇ ಶಿವಯೋಗದ ಆಶಯ. ಕಾಯಕದಲ್ಲಿ ಪ್ರಾಮಾಣಿಕತೆ, ಗಳಿಕೆಯಲ್ಲಿ ನ್ಯಾಯ, ಬದುಕಿನಲ್ಲಿ ದಾಸೋಹದ ಮನೋಭಾವ ಹಾಗೂ ಪ್ರತಿಯೊಬ್ಬರಲ್ಲೂ ಶಿವತತ್ತ್ವವನ್ನು ಕಾಣುವ ದೃಷ್ಟಿ ಶರಣರ ಶಿವಯೋಗದ ಪ್ರಮುಖ ಅಂಶಗಳಾಗಿವೆ ಎಂದು ವಿವರಿಸಿದರು.
ವಚನಗಳಲ್ಲಿ ‘ಕಾಯಕವೇ ಕೈಲಾಸ’ ಎಂಬ ಸಂದೇಶದ ಮೂಲಕ ಶರಣರು ದುಡಿಮೆಗೆ ಪಾವಿತ್ರ್ಯ ನೀಡಿದರು. ದಾಸೋಹದ ಮೂಲಕ ಸ್ವಾರ್ಥವನ್ನು ತೊರೆದು ಸಮಾಜಮುಖಿ ಬದುಕನ್ನು ರೂಪಿಸಿಕೊಳ್ಳುವ ಮಾರ್ಗವನ್ನು ತೋರಿದರು. ಇಷ್ಟಲಿಂಗ ಪೂಜೆಯ ಮೂಲಕ ಬಾಹ್ಯ ಆಚರಣೆಯ ಜೊತೆಗೆ ಅಂತರಂಗದ ಶುದ್ಧಿಗೂ ಮಹತ್ವ ನೀಡಿದರು. ಹೀಗಾಗಿ ವಚನಗಳ ಅಧ್ಯಯನವು ನಮ್ಮ ಚಿಂತನೆ, ನಡೆ-ನುಡಿ ಮತ್ತು ಜೀವನಶೈಲಿಯಲ್ಲಿ ಪರಿವರ್ತನೆ ತರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಶ್ರಾವಣ ಮಾಸವು ಶಿವಭಕ್ತಿಯ ಜೊತೆಗೆ ಆತ್ಮಾವಲೋಕನಕ್ಕೂ ಅವಕಾಶ ಕಲ್ಪಿಸುವ ಪವಿತ್ರ ಕಾಲವಾಗಿದೆ. ಇಷ್ಟಲಿಂಗ ಪೂಜೆ, ಸತ್ಚಿಂತನೆ, ಸತ್ಕಾಯಕ ಮತ್ತು ದಾಸೋಹದ ಮೂಲಕ ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿವಯೋಗವು ಕೇವಲ ಆಚರಣೆಯಾಗದೆ ಜೀವನ ವಿಧಾನವಾಗಬೇಕು ಎಂದರು.
ಕಾರಂಜಿಮಠದ ಪೂಜ್ಯ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಶರಣರು ಪರಮಾತ್ಮನನ್ನು ಇಷ್ಟಲಿಂಗದ ಮೂಲಕ ಮನುಷ್ಯನ ಅಂತರಂಗಕ್ಕೆ ಹತ್ತಿರಗೊಳಿಸಿದರು. ಇಷ್ಟಲಿಂಗ ಪೂಜೆ ಮನಸ್ಸಿನ ಕತ್ತಲೆಯನ್ನು ದೂರ ಮಾಡಿ ಆತ್ಮಜ್ಞಾನದ ಬೆಳಕಿನತ್ತ ಕರೆದೊಯ್ಯುತ್ತದೆ. ಶರಣರ ವಚನಗಳು ಬದುಕಿಗೆ ದಾರಿದೀಪವಾಗಿದ್ದು, ಅವುಗಳನ್ನು ಪ್ರಾಂಜಲ ಮನಸ್ಸಿನಿಂದ ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಜನತೆ ವಚನ ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸುಜಾತಾ ಮಠಪತಿ ವಚನ ಪ್ರಾರ್ಥನೆ ನೆರವೇರಿಸಿದರು. ಡಾ. ಮಹೇಶ ಗುರನಗೌಡರ ಸ್ವಾಗತಿಸಿದರು. ಮಂಗಲಾ ಕಾಕತಿಕರ ವಚನ ವಿಶ್ಲೇಷಣೆ ಮಾಡಿದರು. ಅನಿತಾ ಮಾಲಗತ್ತಿ ಪರಿಚಯಿಸಿದರು. ಸ್ನೇಹಾ ದೊಡ್ಡಣ್ಣವರ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು. ಶಂಕರ ಪಟ್ಟೇದ ದಾಸೋಹ ಸೇವೆಗೈದರು. ಚಂದ್ರಶೇಖರ ಬೆಂಬಳಗಿ, ಪ್ರಸಾದ ಹಿರೇಮಠ, ರಮೇಶ ಕಳಸಣ್ಣವರ, ಪ್ರಕಾಶ ಬಾಳೇಕುಂದ್ರಿ, ಆರ್.ಪಿ.ಪಾಟೀಲ, ವಿದ್ಯಾ ಹುಂಡೇಕರ, ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.