ಬೀದರ: ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಬೀದರ ಎಟಿಎಂ ದರೋಡೆ ಹಾಗೂ ವ್ಯಾನ್ ಸಿಬ್ಬಂದಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 19 ತಿಂಗಳ ನಂತರ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ್ದಾರೆ.
ದರೋಡೆ ಮತ್ತು ಕೊಲೆ ಪ್ರಕರಣದ ಆರೋಪಿಗಳಾದ ಬಿಹಾರದ ವೈಶಾಲಿ ಜಿಲ್ಲೆಯ ಫತೇಪುರ್ ಫುಲ್ವಾರಿಯಾ ನಿವಾಸಿ ಅಮನ್ ಕುಮಾರ ಮತ್ತು ಬಿಹಾರದ ವೈಶಾಲಿ ಜಿಲ್ಲೆಯ ಜನದಾಹಾ ಬಳಿಯ ಮಹಿಸೂರ್ ನಿವಾಸಿ ಅಲೋರಕುಮಾರ ಎಂಬವರನ್ನು ಬೀದರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಈ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಬಿಹಾರದ ವೈಶಾಲಿ ಜಿಲ್ಲೆಯ ದಾಮೋದರ ಎಂಬ ಗ್ರಾಮದಲ್ಲಿ ಈ ಇಬ್ಬರು ದರೋಡೆಕೋರರ ಪ್ರಯಾಣಿಸುತ್ತಿದ್ದ ಕಾರನ್ನು ಬೆನ್ನಟ್ಟಿದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೀದರ ಪೊಲೀಸರಿಗೆ ಈ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತ್ತು; ಹೀಗಾಗಿ, ಆರೋಪಿಗಳನ್ನ ನಿರಂತರವಾಗಿ ವಾಚ್ ಮಾಡಲಾಗಿತ್ತು. ನಂತರ ಬೀದರ ಎಸ್ಪಿ ಪ್ರದೀಪ ಗುಂಟಿ ನೇತೃತ್ವದ ಸುಮಾರು 20 ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ ಬುಧವಾರ (ಆಗಸ್ಟ್ 12) ಮಧ್ಯಾಹ್ನ ಇಬ್ಬರು ದರೋಡೆಕೋರರನ್ನು ಬಂಧಿಸಿದೆ. ಅವರನ್ನು ಬೀದರಿಗೆ ಕರೆತರಲಾಗುತ್ತಿದೆ.
2025 ಜನವರಿ 16 ರಂದು ಬೀದರ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮುಖ್ಯ ಶಾಖೆಯ ಮುಂಭಾಗದಲ್ಲಿ ಹಾಡಹಗಲೇ ಈ ಘಟನೆ ನಡೆದಿತ್ತು. ಬೈಕ್ನಲ್ಲಿ ಬಂದು ದರೋಡೆಕೋರರು ಗುಂಡು ಹಾರಿಸಿ ಎಟಿಎಂಗೆ ತುಂಬಲು ತಂದಿದ್ದ 83 ಲಕ್ಷ ರೂ ಹಣವನ್ನು ದರೋಡೆ ಮಾಡಿದ್ದರು.
ಈ ವೇಳೆ ಸಿಎಂಎಸ್ ಏಜೆನ್ಸಿ ಸಿಬ್ಬಂದಿಯೊಬ್ಬನ್ನು ಕೊಂದು ಇಬ್ಬರು ಖದೀಮರು 83 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ. ದರೋಡೆಕೋರರ ಶೂಟೌಟ್ಗೆ ಗಿರಿ ವೆಂಕಟೇಶ ಎಂಬ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದರು, ಇನ್ನೋರ್ವ ಶಿವಕುಮಾರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು.
ದರೋಡೆಕೋರರ ಬಂಧನದ ಹಿನ್ನೆಲೆಯಲ್ಲಿ ದರೋಡೆ ನಡೆದಿದ್ದ ಸ್ಥಳ ಎಸ್ಬಿಐ ಬ್ಯಾಂಕ್ ಮುಂದೆ ಪೊಲೀಸರು ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ವರದಿಯಾಗಿದೆ.