ಹೈದರಾಬಾದ್ : ಕೇಂದ್ರ ಸಚಿವ ಬಂಡಿ ಸಂಜಯಕುಮಾರ ಪುತ್ರ ಭಗೀರಥ ಸಾಯಿ ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಬಂಡಿ ಭಗೀರಥನಿಗೆ ಮಧ್ಯಂತರ ಪರಿಹಾರ ನೀಡಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ ನಂತರ, ಅವರ ತಂದೆ ಹಾಗೂ ಕೇಂದ್ರಸಚುವ ಬಂಡಿ ಸಂಜಯಕುಮಾರ ಶನಿವಾರ ತಮ್ಮ ಮಗನಿಗೆ ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದರು. ಅದರ ನಂತರ ಪುತ್ರ ಭಗೀರಥ ಸಾಯಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಸಿಗದ ಬೆನ್ನಲ್ಲೇ ನಂತರ ಭಗೀರಥ ಸಾಯಿ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಅದರ ನಂತರ ಈ ಬೆಳವಣಿಗೆ ನಡೆದಿದೆ. 25 ವರ್ಷದ ಭಗೀರಥ ಸಾಯಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ – POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
17 ವರ್ಷದ ಬಾಲಕಿಗೆ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ದಾಖಲಾಗಿರುವ ಪ್ರಕರಣದ ತನಿಖೆಗಾಗಿ ಶನಿವಾರ ತಮ್ಮ ಪುತ್ರನನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಾಗೂ ಬಿಜೆಪಿ ಸಂಸದರಾಗಿರುವ ಬಂಡಿ ಸಂಜಯಕುಮಾರ ತಿಳಿಸಿದ್ದಾರೆ.
‘ಕಾನೂನಿನ ಮುಂದೆ ಎಲ್ಲರೂ ಸಮಾನರು’
ಈ ಕುರಿತು ‘X’ (ಟ್ವಿಟರ್) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವ ಬಂಡಿ ಸಂಜಯಕುಮಾರ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಾವು ನಂಬಿರುವುದಾಗಿ ಬರೆದುಕೊಂಡಿದ್ದಾರೆ.
“ಕಾನೂನು ಮತ್ತು ನ್ಯಾಯಾಂಗದ ಮೇಲಿನ ಅತ್ಯಂತ ಗೌರವದೊಂದಿಗೆ, ಇಂದು ನನ್ನ ಮಗ ಬಂಡಿ ಭಗೀರಥ ನಮ್ಮ ವಕೀಲರ ಮೂಲಕ ತನಿಖೆಗಾಗಿ ತೆಲಂಗಾಣ ಪೊಲೀಸರ ಮುಂದೆ ಹಾಜರಾಗಿದ್ದಾನೆ. ನಾನು ಇದನ್ನು ಮೊದಲೂ ಹೇಳಿದ್ದೇನೆ: ನನ್ನ ಸ್ವಂತ ಮಗನೇ ಆಗಿರಲಿ ಅಥವಾ ಸಾಮಾನ್ಯ ನಾಗರಿಕನೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನ್ನ ಮಗ ಸತತವಾಗಿ ಪ್ರತಿಪಾದಿಸುತ್ತಿದ್ದಾನೆ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಅವರ ಮುಂದೆ ಇಟ್ಟ ನಂತರ, ಈ ವಿಷಯವನ್ನು ಕಾನೂನು ಪ್ರಕ್ರಿಯೆಯ ಮೂಲಕವೇ ಸೂಕ್ತವಾಗಿ ಎದುರಿಸಬೇಕು ಎಂದು ಅವರು ನಮಗೆ ಸಲಹೆ ನೀಡಿದ್ದಾರೆ” ಎಂದು ಸಚಿವರು ಬರೆದಿದ್ದಾರೆ.
“ಅದೇ ಸಮಯದಲ್ಲಿ, ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಕೋರ್ಟ್ ನಡಾವಳಿಗಳು ನಡೆಯುತ್ತಿದ್ದು, ಮುಂದಿನ ವಾರ ಆದೇಶಗಳು ಹೊರಬೀಳುವ ನಿರೀಕ್ಷೆ ಇದ್ದಾಗ್ಯೂ, ತನಿಖೆಗೆ ಸಹಕರಿಸುವಲ್ಲಿ ನಮ್ಮ ಕಡೆಯಿಂದ ಯಾವುದೇ ಹಿಂಜರಿಕೆ ಇರಬಾರದು ಎಂದು ನಾನು ನಿರ್ಧರಿಸಿದೆ. ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ನ್ಯಾಯ ಸಿಗುವುದು ತಡವಾಗಬಹುದು, ಆದರೆ ನಿರಾಕರಣೆಯಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.
17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಮೇ 8 ರಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಭಗೀರಥ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಂತ್ರಸ್ತೆ ಹೇಳಿಕೆಯನ್ನು ದಾಖಲಿಸಿದ ನಂತರ, ಪೊಲೀಸರು ಪೋಕ್ಸೊ ಕಾಯ್ದೆಯ ಹೆಚ್ಚು ಕಠಿಣ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ಸುಲಿಗೆ ಯತ್ನ’ದ ಆರೋಪ
ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಭಗೀರಥ ಸಾಯಿ, ಈ ಪ್ರಕರಣವು ಒಂದು “ಹನಿ-ಟ್ರ್ಯಾಪ್ ಮತ್ತು ಹಣ ವಸೂಲಿ (ಸುಲಿಗೆ) ಮಾಡುವ ಪ್ರಯತ್ನ” ಎಂದು ವಾದಿಸಿದ್ದಾರೆ. ಬಾಲಕಿ ಹಾಗೂ ಆಕೆಯ ಪೋಷಕರು ತನಗೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದು, ಐದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ತಾವೇ ಈ ಹಿಂದೆ ಪೊಲೀಸರನ್ನು ಸಂಪರ್ಕಿಸಿದ್ದಾಗಿ ಸಾಯಿ ಹೇಳಿದ್ದಾರೆ.
ಇತ್ತ ಸಚಿವ ಬಂಡಿ ಸಂಜಯಕುಮಾರ ಸಹ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಇವೆಲ್ಲವೂ ವಿಪಕ್ಷಗಳು ಹರಡುತ್ತಿರುವ “ಸುಳ್ಳು ಪ್ರಚಾರ” ಎಂದು ಕಿಡಿಕಾರಿದ್ದಾರೆ.
