ನವದೆಹಲಿ: ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪದಗ್ರಹಣದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಎಐಸಿಸಿ ಬುಧವಾರ ರಾತ್ರಿ ನೇಮಕ ಮಾಡಿದೆ.
ಹರಿಪ್ರಸಾದ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಸಚಿವರ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಈ ನಡುವೆ, ಕೆಪಿಸಿಸಿ ಅಧ್ಯಕ್ಷರಾಗುವಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಹರಿಪ್ರಸಾದ್ ಅವರ ಮನವೊಲಿಸಿದರು. ಆ ಬಳಿಕ, ಅಧ್ಯಕ್ಷ ಗಾದಿ ವಹಿಸಿಕೊಳ್ಳಲು ಒಪ್ಪಿದರು. ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಡಿಗ ಸಮುದಾಯದ ಅವರು ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಆರು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಜೂನ್ 30ಕ್ಕೆ ಅವರ ಪರಿಷತ್ ಸದಸ್ಯತ್ವ ಮುಗಿಯಲಿದೆ. ಪರಿಷತ್ ಚುನಾವಣೆಗೆ ಮತ್ತೆ ಅವರನ್ನು ಕಣಕ್ಕಿಳಿಸಲಾಗಿದೆ.
ಹೈಕಮಾಂಡ್ ಜತೆಗೆ ನಿಕಟ ಸಂಪರ್ಕ ಹೊಂದಿರುವ ಅವರು ಈ ಹಿಂದೆ 19 ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಅವರು ಪ್ರಸ್ತುತ ಹರಿಯಾಣದ ಉಸ್ತುವಾರಿಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರು ಅಧ್ಯಕ್ಷ ಗಾದಿಯ ಜತೆಗೆ ಸಚಿವ ಸ್ಥಾನಕ್ಕೂ ಪಟ್ಟು ಹಿಡಿದಿದ್ದರು. ಇದಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿರಲಿಲ್ಲ. ಆ ನಂತರ, ಹರಿಪ್ರಸಾದ್ ಹೆಸರು ಮುನ್ನೆಲೆಗೆ ಬಂದಿತ್ತು.
ಪ್ರಬಲ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಜಾತಿ ಸಮೀಕರಣದ ಆಧಾರದಲ್ಲಿ ಈಡಿಗ (ಬಿಲ್ಲವ) ಸಮುದಾಯದ ಹರಿಪ್ರಸಾದ್ ಅವರಿಗೆ ಪಕ್ಷವು ರಾಜ್ಯ ಘಟಕದ ಚುಕ್ಕಾಣಿ ದಯಪಾಲಿಸಿದೆ.
