ನವದೆಹಲಿ: ಔಷಧಗಳ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲ ಬಗೆಯ ಸಿರಪ್ಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿದ್ದುಪಡಿ ಮಾಡಿದೆ.
ವೈದ್ಯರ ಶಿಫಾರಸು ಇಲ್ಲದೆಯೇ ಈ ಸಿರಪ್ಗಳ ಮಾರಾಟವನ್ನು ನಿಷೇಧಿಸುವುದು ಸೇರಿದಂತೆ ಹಲವು ಅಂಶಗಳನ್ನು ತಿದ್ದುಪಡಿ ಒಳಗೊಂಡಿದೆ. ಈ ಮೂಲಕ ಔಷಧಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಚಿವಾಲಯವು ಈ ತಿದ್ದುಪಡಿ ಕುರಿತಂತೆ ಕಳೆದ ವರ್ಷ ಡಿಸೆಂಬರ್ನಲ್ಲಿ ಕರಡು ಅಧಿಸೂಚನೆ ಹೊರಡಿಸಿ, ಎಲ್ಲ ಭಾಗೀದಾರರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು. ಈಗ, ಈ ಕುರಿತು ಗೆಜೆಟ್ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.
ಈ ಮೊದಲಿನ ನಿಯಮಗಳ ಪ್ರಕಾರ, 'ಒಂದು ಸಾವಿರಕ್ಕೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳಲ್ಲಿನ ಚಿಲ್ಲರೆ ವರ್ತಕರು ಕೆಮ್ಮಿನ ಸಿರಪ್ಗಳನ್ನು ಮಾರಾಟ ಮಾಡಬಹುದಿತ್ತು. ಷೆಡ್ಯೂಲ್ ಕೆ(ಕೆಮ್ಮಿನ ಸಿರಪ್ ಸೇರಿ ಕೆಲ ನಿರ್ದಿಷ್ಟ ಔಷಧಗಳ ಮಾರಾಟಕ್ಕೆ ಸಂಬಂಧಿಸಿದ್ದು)
ವ್ಯಾಪ್ತಿಯ ಔಷಧಗಳ ಮಾರಾಟಕ್ಕೆ ಸಂಬಂಧಿಸಿ ನಿಯಮಗಳು ಈ ವರ್ತಕರಿಗೆ ಅನ್ವಯವಾಗುತ್ತಿರಲಿಲ್ಲ. ತಿದ್ದುಪಡಿಯಿಂದಾಗಿ, ಈಗ ಈ ವರ್ತಕರು ಕೆಮ್ಮಿನ ಸಿರಪ್ಗಳನ್ನು ಮಾರಾಟ ಮಾಡುವಂತಿಲ್ಲ' ಎಂದು ಸಚಿವಾಲಯ ತಿಳಿಸಿದೆ.
ಸಿರಪ್ಗಳ ಗುಣಮಟ್ಟ, ಮಾರಾಟ ನಿಯಮಗಳ ಪಾಲನೆ ಕುರಿತು ಮೇಲ್ವಿಚಾರಣೆ, ಅವುಗಳ ಉತ್ಪಾದಕರಿಂದ ಹಿಡಿದು ಮಾರಾಟಗಾರರ ವರೆಗೆ ಎಲ್ಲ ಹಂತದ ಕಣ್ಣಾವಲು ವ್ಯವಸ್ಥೆಯನ್ನು ಈ ತಿದ್ದುಪಡಿಯು ಬಲಪಡಿಸಲಿದೆ ಎಂದು ಮೂಲಗಳು ಹೇಳಿವೆ.
