ಬೆಳಗಾವಿ: ವ್ಯಕ್ತಿಯೋರ್ವರು ಡಿವೈ ಎಸ್ ಪಿ, ಪಿಎಸ್ಐ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಡಿಗೇರಿ ಗ್ರಾಮದ ರವೀಂದ್ರ ದಾನವ್ವಗೋಳ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದರಿಂದಕ್ಕೆ ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅವರೂ ಕೂಡ ನಿರ್ಲಕ್ಷ ಮಾಡಿ ಬೆದರಿಕೆ ಹಾಕಿದ್ದಕ್ಕೆ ಮನನೊಂದ ರವೀಂದ್ರ ನೇಣಿಗೆ ಕೊರಳೊಡ್ಡಿದ್ದಾರೆ.
ರವೀಂದ್ರ, ಲಕ್ಷ್ಮಣ ಚಂದರಗಿ ಮತ್ತು ಭರಮಪ್ಪ ಪೂಜಾರಿ ಎಂಬುವರಿಗೆ 8 ಲಕ್ಷ ರೂಪಾಯಿ ಸಾಲ ನೀಡಿದ್ದರು. ಈ ಹಣವನ್ನು ಲಕ್ಷ್ಮಣ ಚಂದರಗಿ ಮತ್ತು ಭರಮಪ್ಪ ಪೂಜಾರಿ ವಾಪಸ್ ಕೊಟ್ಟಿಲ್ಲ. ಬದಲಾಗಿ ಹಣ ಕೇಳಿದ್ದಕ್ಕೆ ರವೀಂದ್ರಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನ್ಯಾಯ ಕೊಡಿಸಿ ಎಂದು ರವೀಂದ್ರ, ಪಿಎಸ್ಐ ಆನಂದ, ಹಿಂದಿನ ಡಿವೈಎಸ್ಪಿ ಮುಲ್ಲಾಗೆ ಮನವಿ ಮಾಡಿದ್ದರಂತೆ. ಆದರೆ ಪೊಲೀಸರು ಸಹ ಈ ಬಗ್ಗೆ ನಿರ್ಲಕ್ಷ ಮಾಡಿದ್ದಾರೆ. ಸಾಲದ್ದಕ್ಕೆ ಪೊಲೀಸರು ಸಹ ಬೆದರಿಕೆ ಹಾಕಿದ್ದಾರೆ ಎಂದು ರವೀಂದ್ರ ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಬರೆಯಲಾಗಿದೆ.
ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೂಡಲಗಿ ಠಾಣಾ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
