ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು (ಜೂನ್ 3ರಂದು) ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಭವನದಲ್ಲಿ ಸಂಜೆ 4.05ಕ್ಕೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆಯಾಗುತ್ತಿದ್ದಂತೆ ಸಚಿವ ಸಂಪುಟದ ಕುರಿತು ವ್ಯಾಪಕ ಚರ್ಚೆಯಾಗಿತ್ತು.
ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನ ಸಿಗಬಹುದು ಎಂಬುದು ಕುತೂಹಲ ಕೆರಳಿಸಿತು. ಇದೀಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ. ಒಟ್ಟು 13 ಶಾಸಕರು ಸಚಿವರಾಗಿ ಡಿಕೆಶಿ ಜೊತೆ ‘ಗಾಜಿನ ಮನೆಯಲ್ಲಿ’ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಡಿಕೆಶಿ ಸಂಪುಟ ಸೇರಲಿರುವ ಶಾಸಕರು
ಡಾ. ಜಿ. ಪರಮೇಶ್ವರ್
ಕೆ.ಎಚ್. ಮುನಿಯಪ್ಪ
ಕೆ.ಜೆ. ಜಾರ್ಜ್
ಎಂ.ಬಿ. ಪಾಟೀಲ
ರಾಮಲಿಂಗಾ ರೆಡ್ಡಿ
ಸತೀಶ ಜಾರಕಿಹೊಳಿ
ಕೃಷ್ಣಬೈರೇಗೌಡ
ಪ್ರಿಯಾಂಕ್ ಖರ್ಗೆ
ಯು.ಟಿ. ಖಾದರ್
ಈಶ್ವರ್ ಖಂಡ್ರೆ
ಯತೀಂದ್ರ ಸಿದ್ದರಾಮಯ್ಯ
ಬೈರತಿ ಸುರೇಶ್
ಶರಣ ಪ್ರಕಾಶ ಪಾಟೀಲ
ಲೋಕಭವನ ಸಜ್ಜು
ಪ್ರಮಾಣವಚನಕ್ಕೆ ಲೋಕಭವನ ಸಿಂಗಾರಗೊಂಡಿದೆ. ಗಾಜಿನ ಮನೆ, ಉದ್ಯಾನ, ಹುಲ್ಲುಹಾಸಿನಲ್ಲಿ 2,500ಕ್ಕೂ ಹೆಚ್ಚು ಆಸನಗಳನ್ನು ಅಳವಡಿಸಲಾಗಿದೆ. ಇದೇ ಮೊದಲ ಬಾರಿಗೆ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಲಿದೆ. ಈವರೆಗೆ (ಹಿಂದಿನ ರಾಜಭವನ) ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಗಳು ಪಶ್ಚಿಮಾಭಿಮುಖವಾಗಿ ಇರುವ ವೇದಿಕೆಯಲ್ಲಿ ನಡೆದಿದ್ದವು. ಪಶ್ಚಿಮಾಭಿಮುಖವಾಗಿ ಇರುವ ವೇದಿಕೆಯಲ್ಲಿ ಸರ್ವ ಧರ್ಮ ಸಮುದಾಯಗಳ ಧರ್ಮ ಗುರುಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಪುಟ ಸೇರಲಿರುವ ಸಚಿವರ ಕುಟುಂಬದವರಿಗೆ ವೇದಿಕೆಯ ಮೊದಲ ಸಾಲಿನಲ್ಲಿ, ನಂತರದ ಸಾಲುಗಳಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಲೋಕಾಯುಕ್ತರು, ವಿವಿಧ ಕ್ಷೇತ್ರಗಳ ಗಣ್ಯರಿಗೆ ವ್ಯವಸ್ಥೆ ಮಾಡಲಾಗಿದೆ. ಲೋಕಭವನದ ಒಳಗೆ ಆರು ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.
