ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಫಾಜಿಲ್ ನಗರವನ್ನು ಜೈನ ತೀರ್ಥಂಕರ ಭಗವಾನ್ ಮಹಾವೀರರ ಗೌರವಾರ್ಥವಾಗಿ 'ಪಾವಗಡ' ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಘೋಷಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಈ ಘೋಷಣೆ ಮಾಡಿದ ಅವರು, ₹424 ಕೋಟಿಗೂ ಹೆಚ್ಚು ಮೌಲ್ಯದ 278 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರ, ಮಂಜೂರಾತಿ ಪತ್ರ ಮತ್ತು ಚೆಕ್ಗಳನ್ನು ವಿತರಿಸಿದರು.
‘ಮರು ನಾಮಕರಣವು ಭಗವಾನ್ ಮಹಾವೀರ ಮತ್ತು ಈ ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ’ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪಾವಗಡಕ್ಕೆ ಹೊಸ ಗುರುತು: ಸಿಎಂ ಯೋಗಿ
ಈ ವೇಳೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, "ಫಾಜಿಲ್ ನಗರವನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ನಾವು ಅನುಮೋದನೆ ನೀಡಿದ್ದೇವೆ. ಫಾಜಿಲ್ ನಗರವು ಇನ್ನು ಮುಂದೆ 'ಪಾವಗಡʼ ಎಂಬ ಹೊಸ ಗುರುತು ಪಡೆಯಲಿದೆ. ಇದಕ್ಕೆ ಭಗವಾನ್ ಮಹಾವೀರರ ಹೆಸರನ್ನು ಇಡಲಾಗುವುದು. ನಾವು ಈ ನಗರವನ್ನು ಫಾಜಿಲ್ ಎಂದು ಏಕೆ ಕರೆಯಬೇಕು?" ಎಂದು ಪ್ರಶ್ನಿಸಿದರು.
ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜೊತೆಗೆ ಪಾವಗಡ ಹೆಸರೂ ಕೂಡ ಪ್ರಸಿದ್ಧಿ ಪಡೆಯಲಿದೆ. ಪಾವಗಡವು ಶ್ರೀಮಂತ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಜೋಡಿಸಿಕೊಳ್ಳುವ ಮೂಲಕ, ದೇಶ ಹಾಗೂ ಜಗತ್ತಿನಾದ್ಯಂತ ಜನರು ಈ ಪವಿತ್ರ ಸ್ಥಳದತ್ತ ಆಕರ್ಷಿತರಾಗುತ್ತಾರೆ ಎಂದು ಸಿಎಂ ಯೋಗಿ ಆಶಯ ವ್ಯಕ್ತಪಡಿಸಿದರು.
ಪಾವಗಡ ಹೆಸರು ಬಂದಿದ್ದು ಎಲ್ಲಿಂದ?
ಫಾಜಿಲ್ ನಗರದ ಮರುನಾಮಕರಣದ ಪ್ರಸ್ತಾವನೆಯನ್ನು ಸ್ಥಳೀಯ ಆಡಳಿತವು ಈ ಹಿಂದೆ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿತ್ತು. ಪ್ರಸ್ತಾವಿತ ಹೆಸರಾದ 'ಪಾವಗಡ'ದ ಹೆಸರನ್ನು ಬಿಹಾರದ ಪವಿತ್ರ ಜೈನ ಯಾತ್ರಾಸ್ಥಳ ಹಾಗೂ ಭಗವಾನ್ ಮಹಾವೀರರೊಂದಿಗೆ ನಿಕಟ ನಂಟು ಹೊಂದಿರುವ 'ಪಾವಪುರಿ'ಯಿಂದ ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬ ನಾಗರಿಕನೂ ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ಉತ್ತರ ಪ್ರದೇಶದಾದ್ಯಂತ ಅಭಿವೃದ್ಧಿಯನ್ನು ಉತ್ತೇಜಿಸುವ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದೂ ತಿಳಿಸಿದ್ದಾರೆ.
