ಗಣಿಕೊಪ್ಪ : ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳ ಗಮನ ಶಾಲೆಗೆ ಸೆಳೆಯಲು ಶಿಕ್ಷಣ ಕುರಿತು ಘೋಷವಾಕ್ಯಗಳು ಅದರ ಜೊತೆಗೆ ಟ್ರಾಕ್ಟರ್ಗೆ ರಿಬ್ಬನ್ ಹಾಗೂ ಬಲೂನ್ಗಳಿಂದ ಸಿಂಗರಿಸಿಲಾಗಿತ್ತು. ವಿಶೇಷವಾಗಿ ಗ್ರಾಮದ ಮಹಿಳೆಯರು ಕುಂಭ ಕೊಡ ಹೊತ್ತು ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಗ್ರಾಮದಲ್ಲಿ ಒಂದು ಶಿಕ್ಷಣ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಜಂಟಿ ನಿರ್ದೇಶಕ ವೃಷಭೇಂದ್ರ ಮಾತನಾಡಿ ಹಳ್ಳಿಯ ಶಾಲೆಗಳು ಇನ್ನಷ್ಟು ಅಭಿವೃದ್ಧಿಯಾಗಲು ಎಲ್ಲರ ಸಹಕಾರ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಮತ್ತು ಈ ಶಾಲೆಯಲ್ಲಿ ಶಿಕ್ಷಕರ ಮತ್ತು ಮಕ್ಕಳ ಉತ್ಸಾಹ ಹಾಗೂ ಊರಿನ ಜನರ ಸಹಕಾರ ಕಂಡು ಹರ್ಷ ವಾಗುತ್ತಿದೆ ಎಂದರು.
ಕೇತ್ರ ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ ಮಾತನಾಡಿ, ಗಣಿಕೊಪ್ಪ ಶಾಲೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಒಂದು ಮಾದರಿ ಶಾಲೆಯಾಗಿ ಹೊರಹೊಮ್ಮುತ್ತಿದೆ. ಮಕ್ಕಳನ್ನು ಸೆಳೆಯಲು ಒಳ್ಳೆಯ ಶಿಕ್ಷಣದ ವ್ಯವಸ್ಥೆಯ ಜೊತೆ ಜೊತೆಗೆ ಪರಿಸರ ರಕ್ಷಣೆಗೂ ವಿಶೇಷ ಕಾಳಜಿಯನ್ನು ಈ ಶಾಲಾ ಶಿಕ್ಷಕರು. ಶಿಕ್ಷಕಿಯರು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಇಂದಿನ ದಿನಮಾನಗಳಲ್ಲಿ ಸರಕಾರಿ ಶಾಲೆಗಳು ಎಂದರೆ ಅಸಡ್ಡೆ ಮಾಡುವ ಕಾಲದಲ್ಲಿ ಅದನ್ನು ಮೀರಿ ಈ ಶಾಲೆಯು ಬೆಳೆಯುತ್ತಿದೆ. ವಿಶೇಷವಾಗಿ ಎಲ್ಲ ಪಾಲಕರಿಗೆ ಹೂವಿನ ಸಸಿಗಳನ್ನು ಶಾಲೆಯ ಪರವಾಗಿ ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು. ಬೈಲಹೊಂಗಲ ಕ್ಷೇತ್ರ ಸಮನ್ವಯಾಧಿಕಾರಿ ರವಿ ಹಿರೇಮಠ, ಶಿಕ್ಷಣ ಸಂಯೋಜಕ ಎಸ್. ಪಿ ಯರಗಟ್ಟಿ, ಸಿಆರ್ಪಿಗಳಾದ ಎಸ್. ಎನ್. ಮುಲ್ಲಾ, ದೈಹಿಕ ಶಿಕ್ಷಣ ಅಧಿಕಾರಿ ಕಾಂಬಳೆ, ಶಾಲೆಯ ಪ್ರಧಾನ ಗುರು ಎಂ. ಎ. ನದಾಫ್, ಸಹ ಶಿಕ್ಷಕರಾದ ಟಿ. ಬಿ. ಮಧುಭರಮಣ್ಣವರ ಶಾಲಾ ಶಿಕ್ಷಕವೃಂದ, ಎಸ್ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿ ಬಳಗ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಸುನಿತಾ ಬನಸಿ ಸ್ವಾಗತಿಸಿದರು, ಪ್ರೇಮಾ ಗಾಬಿ ನಿರೂಪಿಸಿದರು, ವೀಣಾ ಹಿರೇಮಠ ವಂದಿಸಿದರು.
