ಚಿಕ್ಕೋಡಿ :
“ಚಿಕ್ಕೋಡಿ ಜಿಲ್ಲೆ ಆಗಬೇಕು ಎಂಬ ಆಸೆ ನನಗೂ ಇದೆ. ಆದಷ್ಟು ಬೇಗ ನಾವು ತೀರ್ಮಾನ ಮಾಡುತ್ತೇವೆ. ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಅವರು ಈ ಭಾಗದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಟ್ಟಿರುವ ಎಲ್ಲಾ ಬೇಡಿಕೆ ಈಡೇರಿಸಲು ನಾನು ಬದ್ಧನಾಗಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಗುರುವಾರ ನಡೆದ ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಈ ಭಾಗ ಅಭಿವೃದ್ಧಿಯಾಗಬೇಕು ಹಾಗೂ ಇಲ್ಲಿನ ರೈತರನ್ನು ಕಾಪಾಡುವ ಕೆಲಸ ಮಾಡಲಾಗುವುದು. ನಿಮ್ಮ ಆಶೀರ್ವಾದ ನನ್ನ ಮೇಲೆ, ನಮ್ಮ ಸರ್ಕಾರದ ಮೇಲೆ ಇರಲಿ” ಎಂದು ಮನವಿ ಮಾಡಿದರು.
*ಪಂಚ ಪೀಠಗಳಿಂದ ದೇಶಕ್ಕೆ ಶಕ್ತಿ*
“ರಂಭಾಪುರಿ, ಉಜ್ಜಯಿನಿ, ಕಾಶೀ, ಶ್ರೀಶೈಲ ಸೇರಿದಂತೆ ನಮ್ಮ ಪಂಚ ಪೀಠದ ಶ್ರೀಗಳು ಇಡೀ ದೇಶಕ್ಕೆ ಶಕ್ತಿ ನೀಡುತ್ತಾ ಬಂದಿದ್ದಾರೆ. ಇವುಗಳ ಮಾರ್ಗದರ್ಶನದಲ್ಲಿ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನಾವು ಈ ಧರ್ಮ ಪೀಠಗಳನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗಬೇಕು. ಈ ಸಮಾಜಕ್ಕೆ ಈ ಪೀಠಗಳ ಮಾರ್ಗದರ್ಶನ ಅಗತ್ಯವಿದ್ದು, ನಾವು ಈ ಮಠಗಳಿಗೆ ಪ್ರೋತ್ಸಾಹ ನೀಡಬೇಕು. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು” ಎಂದು ಕರೆ ನೀಡಿದರು.
“ಇಂತಹ ದೊಡ್ಡ ಧರ್ಮ ಪೀಠಗಳ ಧರ್ಮಗುರುಗಳು ಸೇರಿರುವ ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ. ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ” ಎಂದು ಹೇಳಿದರು.
*ಸಚಿವ ಸಂಪುಟ ಸಭೆ ಇದ್ದರೂ ಕಾರ್ಯಕ್ರಮಕ್ಕೆ ಬಂದಿರುವೆ*
“ಶ್ರೀಗಳು ಇಲ್ಲಿಂದ ಬೆಳೆದು, ಈ ಭಾಗದ ಅಭಿವೃದ್ಧಿ ಮಾಡಿ ಶ್ರೀಶೈಲ ಮಠಕ್ಕೆ ಹೋಗಿ ಧರ್ಮ ಉಳಿಸುವ ಪ್ರಯತ್ನ ಮಾಡುತ್ತಿರುವುದು ನಮಗೆ ಶಕ್ತಿ ತುಂಬಿದೆ. ಮನುಷ್ಯನಿಗೆ ಧರ್ಮ, ದೇವರು ಬೇಕು. ಇಲ್ಲದಿದ್ದರೆ ಜೀವನ ಹಾಗೂ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಬದುಕಿಗೆ ಅರ್ಥವು ಇರುವುದಿಲ್ಲ. ನಿಂಬೆಗಿಂತ ಶ್ರೇಷ್ಠವಾದ ಹುಳಿ, ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ, ಶಿವನಿಗಿಂತ ಶ್ರೇಷ್ಠವಾದ ದೇವರು, ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ. ಧರ್ಮ ಇಂದು ನಮ್ಮನ್ನೆಲ್ಲ ಇಲ್ಲಿ ಸೇರಿಸಿದೆ. ಭಕ್ತ ಹಾಗೂ ಭಗವಂತ ನಡುವೆ ವ್ಯವಹಾರ ನಡೆಯುವ ಜಾಗ ದೇವಾಲಯ. ನಾವು ಇಂತಹ ದೇವಾಲಯದಲ್ಲಿ ಕೂತು ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ನಿಮ್ಮ ಭಾಗ್ಯ. ಸಚಿವ ಸಂಪುಟ ಸಭೆ ಇದ್ದರೂ ಅದನ್ನು ಸಂಜೆಗೆ ನಿಗದಿ ಮಾಡಿ ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಬಂದಿರುವೆ” ಎಂದು ಹೇಳಿದರು.
“ದೇವರು ವರ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಈ ಭಾಗದ ಶಾಸಕರಾದ ಪ್ರಕಾಶ್ ಹುಕ್ಕೇರಿ ಹಾಗೂ ಅವರ ಸುಪುತ್ರ ಗಣೇಶ್ ಹುಕ್ಕೇರಿ ಈ ಭಾಗದ ಅಭಿವೃದ್ಧಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ಈ ಧರ್ಮ ಕ್ಷೇತ್ರದ ಕಲ್ಯಾಣ ಮಾಡಿಕೊಂಡು ಬರುತ್ತಿದ್ದಾರೆ” ಎಂದರು.
“ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ ಎಂದು ಇಂತಹ ಧರ್ಮ ಕಾರ್ಯಗಳಿಗೆ ಹುಕ್ಕೇರಿ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ಪ್ರಭಾಕರ್ ಕೊರೆ ಅವರು ಕೂಡ ರಾಜ್ಯದಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ನಾನು ಇಲ್ಲಿಗೆ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ಶ್ರೀಗಳು ಈ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸ ತಿಳಿದು ಬಂದಿದ್ದೇನೆ. ಅವರು ಹೇಳಿದಂತೆ ನಾನು ವೀರ ಗಂಗಾಧರೇಶ್ವರ ಅಜ್ಜಯ್ಯ ಅವರ ಪರಮ ಭಕ್ತ. ಅವರ ಮಾರ್ಗದರ್ಶನದಲ್ಲಿ ನಾನು ಹೆಜ್ಜೆ ಹಾಕುತ್ತಿದ್ದೇನೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅವರು ಸಂದೇಶ ನೀಡಿದ್ದಾರೆ. ನಾವು ಅದೇ ತತ್ವದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ” ಎಂದರು.
“ಈ ಮಠ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ನಾವು ಹುಟ್ಟುವಾಗ ಇಂತಹುದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಧರ್ಮ ಯಾವುದಾದರೂ ತತ್ವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ನಾವು ಇದರಲ್ಲಿ ನಂಬಿಕೆ ಇಟ್ಟಿದ್ದೇವೆ. ಎಲ್ಲಾ ಧರ್ಮಗಳು ಒಂದೇ ಆಚಾರ ವಿಚಾರ ಸಾರುತ್ತವೆ. ಮಠಗಳು ಅವುಗಳನ್ನು ಕಾಪಾಡಿಕೊಂಡು ಬರುತ್ತಿವೆ” ಎಂದು ತಿಳಿಸಿದರು.
*ಮಾಧ್ಯಮ ಪ್ರತಿಕ್ರಿಯೆ:*
ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ನಿರೀಕ್ಷೆ ಇದೆ ಎಂದು ಹೇಳಿದಾಗ, “ಉತ್ತರ ಕರ್ನಾಟಕ ವಿಚಾರದಲ್ಲಿ ನಾವು ಈಗಾಗಲೇ ಮಾಡಿರುವ ತೀರ್ಮಾನ, ಐತಿಹಾಸಿಕವಾದದ್ದು. ಕೃಷ್ಣ ಮೇಲ್ದಂಡೆ ಯೋಜನೆ ಮುಳುಗಡೆ ಪ್ರದೇಶದ ಜನರಿಗೆ ಪರಿಹಾರವಾಗಿ 70 ಸಾವಿರ ಕೋಟಿ ನೀಡಲು ತೀರ್ಮಾನಿಸಿದ್ದೇವೆ” ಎಂದರು.
ಈ ಯೋಜನೆ ಬಗ್ಗೆ ಸಂಸದರು ಮಾತನಾಡುತ್ತಿಲ್ಲ ಎಂದು ಕೇಳಿದಾಗ, “ಈ ಯೋಜನೆಗೆ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದವರು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಸಭೆ ಮಾಡುತ್ತೇನೆ” ಎಂದು ತಿಳಿಸಿದರು.
ವಿಜಯೇಂದ್ರ ಅವರು ಈ ಸರ್ಕಾರವನ್ನು ನಾಲಾಯಕ್ ಸರ್ಕಾರ ಎಂದು ಕರೆದಿದ್ದಾರೆ ಎಂದು ಕೇಳಿದಾಗ, “ಅವರು ಇನ್ನೇನು ಹೇಳಲು ಸಾಧ್ಯ? ಅವರ ಸರ್ಕಾರ ನಾಲಾಯಕ್ ಆಗಿದ್ದಕ್ಕೆ ಜನ ಈ ಲಾಯಕ್ಕಾದ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ” ಎಂದು ತಿರುಗೇಟು ನೀಡಿದರು.


