ಬೆಳಗಾವಿ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಯತ್ನ ಸ್ವಯಂ ಸೇವಾ ಸಂಘಟನೆಯಿಂದ ಪ್ರಭುನಗರದ ಸರ್ಕಾರಿ ಶಾಲೆಗೆ ವಿವಿಧ ಉಪಯೋಗಿ ಸಾಮಗ್ರಿಗಳನ್ನು ದೇಣಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಖುರ್ಚಿಗಳು, ಧ್ವನಿವರ್ಧಕ, ನೀರಿನ ಡ್ರಮ್ ಸೇರಿದಂತೆ ಅಗತ್ಯವಾದ ಹಲವು ವಸ್ತುಗಳನ್ನು ಸಂಘಟನೆಯಿಂದ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಅವರು, “ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬೇಕು. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವೇ ಶಾಶ್ವತ ಸಂಪತ್ತು. ಶಿಕ್ಷಣವಿದ್ದರೆ ವ್ಯಕ್ತಿಯ ಭವಿಷ್ಯ ಮಾತ್ರವಲ್ಲ, ಸಮಾಜದ ಭವಿಷ್ಯವೂ ಪ್ರಕಾಶಮಾನವಾಗುತ್ತದೆ,” ಎಂದು ಹೇಳಿದರು. ಸಮಾಜದ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯದ ಮಟ್ಟಿಗೆ ಶಿಕ್ಷಣ ಕ್ಷೇತ್ರಕ್ಕೆ ಕೈಜೋಡಿಸಿದರೆ ದೇಶದ ಅಭಿವೃದ್ಧಿ ವೇಗವಾಗುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಶಿಕ್ಷಕಿ ಶುಭಾ ಭಟ್ ಅವರು ಮಾತನಾಡಿ, “ಪ್ರಯತ್ನ ಸಂಘಟನೆ ಕಳೆದ ಒಂದೂವರೆ ದಶಕಗಳಿಂದ ನಿಸ್ವಾರ್ಥ ಸೇವಾ ಮನೋಭಾವದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಇಂತಹ ಸಂಘಟನೆಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿಯನ್ನೊಡ್ಡುತ್ತವೆ. ಇದರ ಸದಸ್ಯರ ಸೇವಾಭಾವ ಮತ್ತು ನಿಷ್ಠೆ ಶ್ಲಾಘನೀಯ,” ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯಾಧ್ಯಾಪಕ ಬಸವರಾಜ ಹಂಜಿ ಅವರು ಸಂಘಟನೆಯ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ, ವಿದ್ಯಾರ್ಥಿಗಳ ಕಲಿಕೆ ವಾತಾವರಣವನ್ನು ಉತ್ತಮಗೊಳಿಸಲು ಈ ಸಾಮಗ್ರಿಗಳು ಬಹಳ ಉಪಯುಕ್ತವಾಗಲಿವೆ ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಪೂರ್ಣಿಮಾ ನಾಯ್ಕ ಸ್ವಾಗತಿಸಿದರು. ಶಾಲೆಯ ಮಕ್ಕಳು ಪ್ರಾರ್ಥನೆ, ಸ್ವಾಗತಗೀತೆ, ನೃತ್ಯ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಪ್ರಯತ್ನ ಸಂಘಟನೆಯ ಸದಸ್ಯರಾದ ಗೌರಿ ಸರ್ನೋಬತ್, ಶೋಭಾ ರಘುನಾಥ, ಅಪರ್ಣಾ ಪವಾರ, ಲತಾ ಕಟ್ಟಿ, ವೆಂಕಟೇಶ ಕುಲಕರ್ಣಿ, ಶೈಲೇಶ ಭೂರ್ಸೆ, ಮೇಘನಾ ಭೂರ್ಸೆ, ಬೀನಾ ರಾವ್, ಮಂಗಲಾ ಧಾರವಾಡಕರ್, ಹೇಮಾ ಮುತಾಲಿಕ, ಶ್ವೇತಾ ಬಿಜಾಪುರೆ, ಶುಭಾ ಹೆಗಡೆ, ಉಷಾ ಬಾಳಗಿ, ಸಂಗೀತಾ ಪಾಟೀಲ, ಗೋಪಾಲ ದೇಶಪಾಂಡೆ, ಶಾಲೆಯ ಶಿಕ್ಷಕರಾದ ಕೆ.ಎನ್.ಮಿರಜಕರ್, ದೀಪಾ ಹುಕ್ಕೇರಿಮಠ, ಸವಿತಾ ಶಿಂತ್ರೆ, ಮಮತಾ ತಂಗಡಗಿ, ಕೃಷ್ಣಾ ಪೂಜೇರ್, ಜಯಲಕ್ಷ್ಮೀ, ಜ್ಯೋತಿ ರಂಗಿ, ಶಿಕ್ಷಣ ಸಂಯೋಜಕಿ ಕ್ರಾಂತಿ ಪಾಟೀಲ, ಪ್ರಭಾವತಿ ಮಠಪತಿ, ಬಸಗೌಡ ಪಾಟೀಲ, ಬಸಪ್ಪಣ್ಣ ಕೊಣ್ಣೂರಿ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಪೋಷಕರು ಹಾಗೂ ಪ್ರಭುನಗರ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವು ಸಮಾಜಸೇವೆಯ ಮಹತ್ವವನ್ನು ಸಾರುವಂತಿದ್ದು, ಶಿಕ್ಷಣದ ಬೆಂಬಲಕ್ಕೆ ಸಮುದಾಯ ಒಟ್ಟಾಗಿ ನಿಲ್ಲುವ ಅಗತ್ಯತೆಯನ್ನು ನೆನಪಿಸಿತು.


