ಲಖಿಸರಾಯಿ: ಬಿಹಾರದ ಲಖಿಸರಾಯಿ ಜಿಲ್ಲೆಯ ಅಶೋಕಧಾಮ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಂತಹ ಘಟನೆಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಮಹಿಳೆಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ಶ್ರಾವಣ ಮಾಸದ ಸೋಮವಾರದ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಶಿವನ ದರ್ಶನ ಹಾಗೂ ಪೂಜೆ ಸಲ್ಲಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಜಿಲ್ಲಾಧಿಕಾರಿ (DM) ಶೈಲೇಂದ್ರಕುಮಾರ ಅವರ ಪ್ರಕಾರ, ಸೋಮವಾರದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಬೆಳಗ್ಗೆ 6:30ರಿಂದ 6:45ರ ನಡುವೆ ಎರಡು ರೈಲುಗಳು ಅಶೋಕಧಾಮ ಹಾಲ್ಟ್ನಲ್ಲಿ ನಿಂತ ಬಳಿಕ, ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಯಿತು.
ಭಕ್ತರ ಸರತಿ ಸಾಲು ಅಶೋಕಧಾಮ ಹಾಲ್ಟ್ವರೆಗೂ ತಲುಪಿತ್ತು. ಇದೇ ವೇಳೆ ಹಾಲ್ಟ್ನಲ್ಲಿ ಎರಡು ರೈಲುಗಳು ನಿಂತಿದ್ದವು. ಇದ್ದಕ್ಕಿದ್ದಂತೆ ವಿದ್ಯುತ್ ಕಂಬವೊಂದು ಕುಸಿದು ಬಿದ್ದಿದ್ದು, ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ ಅವರ ಪ್ರಕಾರ, ಆ ಕಂಬವು ಪುರುಷರ ಸರತಿ ಸಾಲಿನ ಬಲಭಾಗದಲ್ಲಿತ್ತು. ಕಂಬ ಕುಸಿದಾಗ ಅ ತಂತಿ ಜನರ ಮೇಲೆ ಬಿದ್ದಿದೆ ಹಾಗೂ ಅದು ವಿದ್ಯುತ್ ಹರಿಯುತ್ತಿದ್ದ ತಂತಿ ಎಂಬ ವದಂತಿ ಹರಡಿತು. ಆದರೆ ವಾಸ್ತವದಲ್ಲಿ ಕೆಳಗೆ ಬಿದ್ದಿದ್ದು ವಿದ್ಯುತ್ ತಂತಿಯಲ್ಲ, ಕೇಬಲ್ ವೈರ್ ಆಗಿತ್ತು.
ಈ ವದಂತಿಯಿಂದಾಗಿ ಜನರಲ್ಲಿ ಏಕಾಏಕಿ ಭಯ ಮತ್ತು ಗೊಂದಲ ಉಂಟಾಯಿತು. ಪರಿಣಾಮ ಪುರುಷರ ಸರತಿ ಸಾಲಿನ ಬದಿಯಲ್ಲಿ ಉಂಟಾದ ಒತ್ತಡ ಮಹಿಳೆಯರ ಸರತಿ ಸಾಲಿನ ಮೇಲೂ ಪರಿಣಾಮ ಬೀರಿತು. ಭಾರೀ ಜನಸಂದಣಿಯ ಒತ್ತಡಕ್ಕೆ ಒಂದು ಬದಿಯ ಬ್ಯಾರಿಕೇಡಿಂಗ್ ಕೂಡ ಮುರಿದುಬಿದ್ದಿತು. ಇದರಿಂದ ಮಹಿಳೆಯರು ಒಬ್ಬರ ಮೇಲೊಬ್ಬರು ಬೀಳಲು ಆರಂಭಿಸಿದರು. ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣಗೊಂಡು ದುರಂತ ಸಂಭವಿಸಿದೆ.
ಸ್ಥಳದಲ್ಲಿ ಆತಂಕ, ಗಾಯಾಳುಗಳಿಗೆ ಚಿಕಿತ್ಸೆ
ಘಟನೆಯ ಬಳಿಕ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಮತ್ತು ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಹಿರಿಯ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತಕ್ಕೆ ನಿಖರವಾಗಿ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಆಡಳಿತ ಸ್ಪಷ್ಟಪಡಿಸಿದೆ. ಭಾರೀ ಜನಸಂದಣಿ, ಬ್ಯಾರಿಕೇಡ್ ಕುಸಿತ, ವಿದ್ಯುತ್ ಕಂಬ ಬೀಳುವುದು ಮತ್ತು ಅದರಿಂದ ಹರಡಿದ ವದಂತಿ ಸೇರಿದಂತೆ ಘಟನೆಗೆ ಕಾರಣವಾದ ಎಲ್ಲ ಅಂಶಗಳನ್ನೂ ತನಿಖೆಯಲ್ಲಿ ಪರಿಶೀಲಿಸುವ ಸಾಧ್ಯತೆಯಿದೆ.
ಶ್ರಾವಣ ಮಾಸದ ಸೋಮವಾರದಂದು ಶಿವನ ದರ್ಶನಕ್ಕಾಗಿ ಭಕ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ದುರಂತವು ದೇವಸ್ಥಾನದಲ್ಲಿ ಜನಸಂದಣಿ ನಿರ್ವಹಣೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.