ಶ್ರೀ ಕ್ಷೇತ್ರ ಗೋಕರ್ಣವು ಭೂಕೈಲಾಸ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ, ಅದಕ್ಕೆ ಬಹುಮುಖ್ಯ ಕಾರಣ ಇಲ್ಲಿರುವ ಸಾಕ್ಷಾತ್ ಪರಶಿವನ ಆತ್ಮಲಿಂಗ ರೂಪಿ ಮಹಾಬಲೇಶ್ವರ ದೇವರು , ಆ ಆತ್ಮಲಿಂಗವನ್ನು ಸ್ಥಾಪಿಸಿದ್ದೆ ಶ್ರೀ ಶಂಕರ ಸುತ ಮಹಾಗಣಪತಿ, ಸಿಟ್ಟಿನಿಂದ ರಾವಣ ತಲೆಗೆ ಗುದ್ದಿದರಿಂದ ಗಣಪನು ಒಂದಿಷ್ಟು ಹೆಜ್ಜೆ ದೂರ ಸರಿದು ಅಲ್ಲೇ ನೆಲೆನಿಂತ ಎಂಬುದು ಪುರಾಣ ಕಥನ,
ಅದಕೆ ಸಾಕ್ಷಿ ಎಂಬಂತೆ ಗಣಪನ ಶಿರದ ಮೇಲೆ ಸಣ್ಣ ಕುಳಿ ಇದೆ.
ಒಂದು ಕೈಯಲ್ಲಿ ಕಮಲ ಇನ್ನೊಂದು ಕೈಯಲ್ಲಿ ಮೋದಕ ಪಾತ್ರೆಯನ್ನು ಹಿಡಿದುಕೊಂಡು ಬಂದ ಭಕ್ತರನ್ನು ಹರಸುತ್ತ ನೆಲೆ ನಿಂತಿದ್ದಾನೆ ಮಹಾಗಣಪ.
ಶ್ರೀ ಮಹಾಬಲೇಶ್ವರ ದೇವರನ್ನು ದರ್ಶಿಸುವ, ಪೂಜಿಸುವ ಮೊದಲು ಶ್ರೀ ಮಹಾಗಣಪತಿಯನ್ನು ಪೂಜಿಸಿ, ದರ್ಶಿಸಿ ಹೋಗುವುದು ಸಂಪ್ರದಾಯ ಹಾಗೂ ಅದು ನಿಯಮವಿದ್ದಂತೆ.
ಕಳೆದ ಕೆಲ ದಿನದ ಹಿಂದಷ್ಟೇ ಶ್ರೀ ಮಹಾಗಣಪತಿ ದೇವರನ್ನು ಭಕ್ತರು ಸ್ಪರ್ಶಿಸಿ ಪೂಜಿಸುವುದು ನಿರ್ಬಂಧಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಪ್ರಕಾರ ಪ್ರಾಚೀನವಾದ ಶತ ಶತಮಾನಗಳ ಕಾಲದ ಈ ಶಿಲಾ ಪ್ರತಿಮೆಯು ಸಂರಕ್ಷಣೆಯ ಹಾಗೂ ಮುಂದಿನ ದಿನದಲ್ಲಿ ಈ ದಿವ್ಯ ವಿಗ್ರಹದ ಕಳೆ ಕಾಯ್ದುಕೊಳ್ಳುವ ಸಲುವಾಗಿ ಸ್ಪರ್ಶ ದರ್ಶನವನ್ನು ನಿರ್ಬಂಧಿಸಲಾಗಿದೆ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಹುಟ್ಟಿ ಇಷ್ಟು ವರ್ಷ ಆ ಪ್ರಥಮ ಪೂಜಿತ ಶ್ರೀ ಮಹಾಗಣಪತಿಯನ್ನು ಸ್ಪರ್ಶಿಸಿ ಪೂಜಿಸಿದ್ದು ನಮ್ಮ ಭಾಗ್ಯ ಎಂದು ಹೇಳುವುದಕ್ಕಿಂತ ಅದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದರೇ ತಪ್ಪಾಗದು.
ಲೇಖನ : ಶ್ರೇಯಸ್ ಭಟ್ ಗೋಕರ್ಣ