ನವದೆಹಲಿ: ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ನಡೆಯುತ್ತಿರುವ ನೀಟ್ (NEET) ಪೇಪರ್ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ತಲೆಬಾಗಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡುವೆ ನಡೆಯಬೇಕಿದ್ದ ಮೂರನೇ ಹಂತದ ಮಾತುಕತೆಗೆ ಕೆಲವೇ ಗಂಟೆಗಳ ಮೊದಲು ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಖಾತೆಯಲ್ಲಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಮ್ಮ ರಾಜೀನಾಮೆ ಕುರಿತು X ನಲ್ಲಿ ಬರೆದುಕೊಂಡಿರುವ ಧರ್ಮೇಂದ್ರ ಪ್ರಧಾನ್, “ನಮ್ಮ ದೇಶದ ಯುವಜನರ ಆಕಾಂಕ್ಷೆಗಳು, ಭಾವನೆಗಳು ಮತ್ತು ನ್ಯಾಯಯುತ ನಿರೀಕ್ಷೆಗಳಿಗೆ ನಾನು ಅಪಾರ ಗೌರವ ನೀಡುತ್ತೇನೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸು ಮಾಡುವುದು ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದ ನೈತಿಕ ಸಂಕಲ್ಪವಾಗಿದೆ. ಪ್ರಧಾನಿಯವರ ದಾರ್ಶನಿಕ ನಾಯಕತ್ವದಲ್ಲಿ ದೇಶಸೇವೆ ಮಾಡಲು ನನಗೆ ಸಿಕ್ಕ ಅವಕಾಶಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
“ದೇಶದ ಯುವಶಕ್ತಿ ಗೊಂದಲದ ಬಲೆಯಲ್ಲಿ ಸಿಲುಕಿಕೊಳ್ಳಲು ನಾವು ಬಿಡುವುದಿಲ್ಲ ಎಂಬುದು ನನ್ನ ದೃಢ ಸಂಕಲ್ಪ. ಜಂತರ್ ಮಂತರ್ ಹಾಗೂ ದೇಶಾದ್ಯಂತ ಉದ್ಭವಿಸಿರುವ ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ರಾಷ್ಟ್ರವಿರೋಧಿ ಶಕ್ತಿಗಳಿಗೆ ಅವಕಾಶ ಸಿಗಬಾರದು, ದೇಶದ ಐಕ್ಯತೆ ಅಖಂಡವಾಗಿರಬೇಕು, ಭಾರತದ ಒಬ್ಬನೇ ಒಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ಸಂಕಷ್ಟಗಳಲ್ಲಿ ಸಿಲುಕಬಾರದು ಮತ್ತು ನಮ್ಮ ಮಕ್ಕಳು ತಮ್ಮ ಸಮಯವನ್ನು ಅಭ್ಯಾಸಕ್ಕೆ ವಿನಿಯೋಗಿಸಿ ವೃತ್ತಿಜೀವನ ರೂಪಿಸಿಕೊಳ್ಳುವುದರತ್ತ ಗಮನಹರಿಸಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಗೌರವಾನ್ವಿತ ಪ್ರಧಾನಿಯವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡುಬಿಟ್ಟಿದ್ದ ವಿದ್ಯಾರ್ಥಿ ಪ್ರತಿಯೋಗಿಗಳ ಮುಖ್ಯ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಾಗಿತ್ತು. ಸಚಿವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆಯೇ ಜಂತರ್ ಮಂತರ್ನಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಈ ಸರ್ಕಾರದಲ್ಲಿ ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ. ನಾವು ಗೆದ್ದಿದ್ದೇವೆ!” ಎಂದು ಜಂತರ್ ಮಂತರ್ ವೇದಿಕೆಯಿಂದ ಘೋಷಿಸಿದರು. ಸಿಜಿಪಿ ತನ್ನ ಅಧಿಕೃತ ಖಾತೆಯಲ್ಲಿ “ವಿದ್ಯಾರ್ಥಿ ಶಕ್ತಿ ಚಿರಾಯುವಾಗಲಿ” ಎಂದು ಬರೆದುಕೊಂಡಿದೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಬಾರದು ಹಾಗೂ ನೀಟ್ ಪೇಪರ್ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮೂರು ಬೇಡಿಕೆಗಳನ್ನು ಹೋರಾಟಗಾರರು ಮುಂದಿಟ್ಟಿದ್ದರು.
ಶುಕ್ರವಾರ ನಡೆದ ಮಾತುಕತೆಯಲ್ಲಿ ಕೇಂದ್ರ ಸರ್ಕಾರವು ಕೊನೆಯ ಎರಡು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತಾದರೂ, ಸಚಿವರ ರಾಜೀನಾಮೆ ವಿಚಾರದಲ್ಲಿ ಮೌನ ವಹಿಸಿತ್ತು. ಆದರೆ ಶನಿವಾರ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಈ ವಿದ್ಯಾರ್ಥಿ ಪ್ರತಿಭಟನೆಯು ದೇಶದ ಹತ್ತಾರು ನಗರಗಳಿಗೆ ವ್ಯಾಪಿಸಿ ದೃಢವಾದ ಹೋರಾಟವಾಗಿ ಮಾರ್ಪಟ್ಟಿತ್ತು. ಸಮಸ್ತ ವಿಪಕ್ಷಗಳು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತೆಗೆದುಕೊಂಡಿದ್ದವು.
ಕೇಂದ್ರದ ಜೊತೆ 3ನೇ ಸುತ್ತಿನ ಮಾತುಕತೆ ಯಶಸ್ವಿ :
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆಯನ್ನು “ತಕ್ಷಣದಿಂದಲೇ ಜಾರಿಗೆ ಬರುವಂತೆ” ಹಿಂಪಡೆದಿದ್ದು, ದೆಹಲಿಯ ಜಂತರ್ ಮಂತರ್ನಲ್ಲಿದ್ದ ಬೆಂಬಲಿಗರಿಗೆ ಮನೆಗೆ ಹಿಂತಿರುಗುವಂತೆ ಮನವಿ ಮಾಡಿದೆ.
ಶುಕ್ರವಾರ ಅಪರಾಹ್ನ ನಡೆದ ಸರ್ಕಾರ ಮತ್ತು ‘ಸಿಜೆಪಿ’ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಮುಖ ಘೋಷಣೆ ಹೊರಬಿದ್ದಿದೆ. ಶಿಕ್ಷಣ ಸಚಿವರ ರಾಜೀನಾಮೆಯು ಸಿಜೆಪಿಯ (satirical political group) ಮುಖ್ಯ ಬೇಡಿಕೆಯಾಗಿತ್ತು.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಹಾಗೂ ಅಶುತೋಷ ರಾಂಕಾ, ಸರ್ಕಾರವು ನೀಡಿದ ಭರವಸೆಯ ಆಧಾರದ ಮೇಲೆ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈಗಾಗಲೇ ಒಂದು ಪ್ರಮುಖ ಬೇಡಿಕೆ ಈಡೇರಿದ್ದು, ಉಳಿದ ಬೇಡಿಕೆಗಳಿಗೆ ಸರ್ಕಾರ ಸಮ್ಮತಿಸಿದೆ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಹಾಗೂ ಪ್ರತಿಭಟನೆಯಲ್ಲಿ ನಿರತ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಅಥವಾ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಾವಳಿಗಳ ಪ್ರಕಾರ ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಸೌರವ್ ದಾಸ್ ಮಾತನಾಡಿ, “ಸರ್ಕಾರವು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿರುವ ಭರವಸೆ ನೀಡಿದ್ದರಿಂದ ಪ್ರತಿಭಟನಾ ನಿರತರೆಲ್ಲರೂ ಶಾಂತಿಯುತವಾಗಿ ಮನೆಗೆ ಹಿಂತಿರುಗಬೇಕಾಗಿ ವಿನಂತಿಸುತ್ತೇವೆ” ಎಂದರು. ಮತ್ತೊಬ್ಬ ವಕ್ತಾರ ಅಶುತೋಷ್ ರಾಂಕಾ ಮಾತನಾಡಿ, ಎಲ್ಲರೂ ಪ್ರತಿಭಟನಾ ಸ್ಥಳಗಳಿಂದ ಶಾಂತಿಯುತವಾಗಿ ಹೊರನಡೆಯಬೇಕೆಂದು ಕೋರುತ್ತೇವೆ. ನಮ್ಮ ಬೇಡಿಕೆಗಳು ತೀವ್ರಸ್ವರೂಪದ್ದಾಗಿರಲಿಲ್ಲ, ಅತ್ಯಂತ ಮೂಲಭೂತವಾಗಿದ್ದವು. ಈಗ ಸರ್ಕಾರ ಅವುಗಳನ್ನು ಅಂಗೀಕರಿಸಿದೆ,” ಎಂದು ತಿಳಿಸಿದರು.
ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ” : ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಂತರ ಸೋನಂ ವಾಂಗ್ಚುಕ್ ಮೊದಲ ಪ್ರತಿಕ್ರಿಯೆ:
ದೇಶಾದ್ಯಂತ ತೀವ್ರ ಕಾವು ಪಡೆದುಕೊಂಡಿದ್ದ ಪಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪರೀಕ್ಷಾ ಅಕ್ರಮಗಳ ವಿವಾದ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ನಿರ್ಧಾರವನ್ನು ಹೆಸರಾಂತ ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಹೋರಾಟಗಾರ ಲಡಾಖ್ನ ಸೋನಮ್ ವಾಂಗ್ಚುಕ್ “ಪ್ರಜಾಪ್ರಭುತ್ವದ ನಿಜವಾದ ಜಯ” ಎಂದು ಬಣ್ಣಿಸಿದ್ದಾರೆ.
ಸಚಿವರ ರಾಜೀನಾಮೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವಾಂಗ್ಚುಕ್, ಗುರುವಾರ ತಡರಾತ್ರಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.
“ಬೀದಿಯಿಂದ ಸಿಕ್ಕ ನೆರವು”: ‘ಎಕ್ಸ್’ನಲ್ಲಿ ವಾಂಗ್ಚುಕ್ ಭಾವುಕ ಪೋಸ್ಟ್
ಸಚಿವರ ರಾಜೀನಾಮೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ ಸೋನಮ್ ವಾಂಗ್ಚುಕ್, “ಇದು ಪ್ರಜಾಪ್ರಭುತ್ವದ ಜಯ… ನೇರ ಪ್ರಜಾಪ್ರಭುತ್ವ… ನೇರವಾಗಿ ಬೀದಿಗಳಿಂದ ಸಿಕ್ಕ ಗೆಲುವು. ಇದು ಶಾಂತಿ, ತಾಳ್ಮೆ ಮತ್ತು ಸತತ ಪ್ರಯತ್ನಕ್ಕೆ ಸಿಕ್ಕ ಜಯ,” ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಈ ಹೋರಾಟವನ್ನು ಮುನ್ನಡೆಸಿದ ಕಾಕ್ರೋಚ್ ಜನತಾ ಪಾರ್ಟಿ (CJP), ದೇಶದ ಯುವಜನತೆ (Gen Z) ಮತ್ತು ಪ್ರಜೆಗಳಿಗೆ ಅಭಿನಂದನೆ ಸಲ್ಲಿಸಿದ ಅವರು, “ದೇಶದ ಮೂಲೆ ಮೂಲೆಯಿಂದಲೂ ಭಯವನ್ನು ತೊರೆದು, ಒಗ್ಗಟ್ಟಿನಿಂದ ಧ್ವನಿ ಎತ್ತಿದ ಪ್ರತಿಯೊಬ್ಬ ನಾಗರಿಕನಿಗೂ ಧನ್ಯವಾದಗಳು,” ಎಂದು ತಿಳಿಸಿದ್ದಾರೆ.
ಯುವಜನತೆಯೇ ‘ವಿಶ್ವಗುರು’ : ಗೀತಾಂಜಲಿ ಜೆ. ಆಂಗ್ಮೋ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತು ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಕೂಡ ಪ್ರತಿಕ್ರಿಯಿಸಿದ್ದು, “ಭಾರತ ‘ವಿಶ್ವಗುರು’ ಎಂದರೆ ಏನು ಎಂಬುದನ್ನು ಯಾರಾದರೂ ತೋರಿಸಿಕೊಟ್ಟಿದ್ದರೆ, ಅದು ನಮ್ಮ ದೇಶದ ಯುವಜನತೆ (Gen Z)” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ನೀಟ್-ಯುಜಿ (NEET-UG) ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವಾಲಯದ ವಿರುದ್ಧ ವಿದ್ಯಾರ್ಥಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.
“ನನ್ನ ಸ್ವಪ್ರತಿಷ್ಠೆಯ ಪ್ರಶ್ನೆಯಲ್ಲ”: ಧರ್ಮೇಂದ್ರ ಪ್ರಧಾನ್
ತಮ್ಮ ರಾಜೀನಾಮೆ ಹೇಳಿಕೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಕ್ಷೇತ್ರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ತಮ್ಮ ನಾಲ್ಕು ದಶಕಗಳ ಬದ್ಧತೆಯನ್ನು ಸ್ಮರಿಸಿದ್ದಾರೆ. ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೇ 3 ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಲೋಪದೋಷಗಳನ್ನು ಒಪ್ಪಿಕೊಂಡ ಅವರು, ಈ ಬಿಕ್ಕಟ್ಟಿನ ಸಮಯದಲ್ಲಿ ತಾವು ಜವಾಬ್ದಾರಿಯಿಂದ ಎಂದಿಗೂ ತಪ್ಪಿಸಿಕೊಂಡು ಓಡಿಹೋಗಿಲ್ಲ ಎಂದು ಹೇಳಿದ್ದಾರೆ,
“ಯಾವೊಬ್ಬ ಅರ್ಹ ವಿದ್ಯಾರ್ಥಿಯೂ ಪರೀಕ್ಷಾ ಮಾಫಿಯಾಗಳಿಂದ ತೊಂದರೆ ಅನುಭವಿಸಬಾರದು ಮತ್ತು ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು ಎಂಬುದೇ ನನ್ನ ದೃಢ ಸಂಕಲ್ಪವಾಗಿತ್ತು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ವ್ಯಕ್ತಿಗಳು ವಿದ್ಯಾರ್ಥಿ ಸಮುದಾಯವನ್ನು ಹಾದಿ ತಪ್ಪಿಸಿ ಪ್ರಗತಿಗೆ ಅಡ್ಡಿಪಡಿಸಲು ಯತ್ನಿಸಿದರು” ಎಂದು ಹೇಳಿದ್ದಾರೆ.
“ಕಳೆದ 10 ದಿನಗಳ ಬೆಳವಣಿಗೆಗಳು ನನಗೆ ತೀವ್ರ ಬೇಸರ ತಂದಿವೆ. ಇದು ನನಗೆ ವ್ಯಕ್ತಿಗತ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವ ಶಕ್ತಿಯೇ ಈ ದೇಶದ ನಿಜವಾದ ಶಕ್ತಿ,” ಎಂದು ಪ್ರಧಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.