ಬೆಳಗಾವಿ : ರಾಜ್ಯದ ನೂತನ ಸಂಪುಟದಲ್ಲಿ ಹಿರಿಯ ರಾಜಕಾರಣಿ, ಮುತ್ಸದ್ಧಿ, ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರಾಜಕೀಯ ಹಾದಿಯನ್ನು ಕ್ರಮಿಸುತ್ತ ಬಂದಿರುವ ಎಚ್.ಕೆ.ಪಾಟೀಲ ಅವರು ಸೇರ್ಪಡೆಯಾಗದೇ ಇರುವುದು ನಾಡಿನ ಪ್ರಜ್ಞಾವಂತ ನಾಗರಿಕರಿಗೆ ಅಚ್ಚರಿ ಹಾಗೂ ಆಘಾತವನ್ನುಂಟು ಮಾಡಿದೆ. ವಿಶೇಷವಾಗಿ ಗಡಿನಾಡು ಹಾಗೂ ಹೊರನಾಡು ಕನ್ನಡಿಗರಿಗೆ ಮತ್ತು ಕನ್ನಡ ಪರ ಸಂಘಟನೆಗಳಿಗೆ ಭಾರಿ ನಿರಾಸೆಯನ್ನುಂಟು ಮಾಡಿದೆ ಎಂದು ಬೆಳಗಾವಿಯ ವಿವಿಧ ಕನ್ನಡ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಈ ಬಗ್ಗೆ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ರವಾನೆ ಮಾಡಿವೆ.
ಗಡಿನಾಡು ಹಾಗೂ ಹೊರನಾಡು ಕನ್ನಡಿಗರ ಒತ್ತಾಯದ ಮೇರೆಗೆ 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಮಂತ್ರಿಗಳನ್ನಾಗಿ ನೇಮಕ ಮಾಡಿದ್ದರು. ನಾಡು, ನುಡಿ, ಗಡಿಯ ಸಮಸ್ಯೆಗಳ ಬಗ್ಗೆ ಆಳವಾದ ಅಭ್ಯಾಸ ಹಾಗೂ ಅಧ್ಯಯನ ಮಾಡಿರುವ ಅವರು ಕರ್ನಾಟಕದ ಗಡಿ ಭಾಗದ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಚರ್ಚಿಸುತ್ತ ಬಂದಿರುವ ಪರಿಣಾಮವಾಗಿ 2023 ರಲ್ಲಿ ಮತ್ತೆ ಅವರನ್ನೇ ಗಡಿ ಉಸ್ತವಾರಿ ಸಚಿವರನ್ನಾಗಿ ಸಿದ್ದರಾಮಯ್ಯನವರು ನೇಮಕ ಮಾಡಿದ್ದರು. ಬೆಳಗಾವಿ ಗಡಿ ಭಾಗದ ಕನ್ನಡ ಸಂಘಟನೆಗಳೊಂದಿಗೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರುವ ಅವರು ರಾಜ್ಯ ರಚನೆಯಾಗಿ 70 ವರ್ಷಗಳ ನಂತರವೂ ಕನ್ನಡ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿರದ ಗ್ರಾಮಗಳಲ್ಲಿ ಶಾಲೆಗಳನ್ನು ಮಂಜೂರು ಮಾಡಿಕೊಟ್ಟರು. ರಾಜ್ಯ ರಚನೆಯಾಗಿ 70 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲು ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಆಚರಣೆಗಾಗಿ ತಮ್ಮ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದರು. ಎಚ್.ಕೆ. ಪಾಟೀಲ ಅವರ ತಂದೆ, ಹುಲಕೋಟಿ ಹುಲಿ ದಿ.ಕೆ.ಎಚ್.ಪಾಟೀಲ ಅವರು 1973 ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಗಡಿ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಂತವರ ಪುತ್ರ ಎಚ್.ಕೆ. ಪಾಟೀಲರವರು ಕರ್ನಾಟಕ ಕಂಡ ಸಭ್ಯ ಹಾಗೂ ಸೈದ್ಧಾಂತಿಕ ರಾಜಕಾರಣಿ. ಅವರನ್ನು ಸಂಪುಟದಿಂದ ದೂರವಿಟ್ಟಿರುವುದರಿಂದ ಕರ್ನಾಟಕದ ಜನತೆಗೆ ತಪ್ಪು ಸಂದೇಶ ಹೋಗಿದೆ. ಇದನ್ನು ಸರಿಪಡಿಸುವ ಹೊಣಗಾರಿಕೆ ತಮ್ಮ ಮೇಲಿದೆ ಎಂದು ಸಂಘಟನೆಗಳು ಹೇಳಿವೆ.
ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾವು ಸಂಪುಟದ ವಿಸ್ತರಣೆಯ ಸಂದರ್ಭದಲ್ಲಿ ಅವರನ್ನು ಮರು ಸೇರ್ಪಡೆ ಮಾಡಿಕೊಂಡು ಸೈದ್ಧಾಂತಿಕ ನೆಲಗಟ್ಟಿನ ರಾಜಕೀಯಕ್ಕೆ ಇನ್ನೂ ಆಸ್ಪದವಿದೆಯೆಂಬ ಸಂದೇಶವನ್ನು ರಾಜ್ಯದ ಜನತೆಗೆ ಕಳಿಸಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇವೆ ಎಂದು ತಿಳಿಸಿವೆ.
