ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸುವ ಸಂಬಂಧ ರಾಜ್ಯ ಸರಕಾರ ವರದಿ ಕೇಳಿದ್ದು ಈ ಬಗ್ಗೆ ಸೋಮವಾರ ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸುವದಾಗಿ
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಿಳಿಸಿದ್ದಾರೆ.
ಕನ್ನಡ ಸಂಘಟನೆಗಳ ನಿಯೋಗ ಸಚಿವರನ್ನು ಜಿಲ್ಲಾಧಿಕಾರಿ ಕೊಠಡಿಯಲ್ಲಿ
ಭೇಟಿಯಾಗಿ ಪಾಲಿಕೆಯ ಗೊತ್ತುವಳಿ ಅಂಗೀಕರಿಸುವ ಸಂಬಂಧ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಪಾಲಿಕೆಗೆ ತಮ್ಮ ಅಭಿಪ್ರಾಯ ತಿಳಿಸುವ ಬದಲಾಗಿ ಜಾರಿಕೊಳ್ಳುತ್ತಿದ್ದಾರೆಂದು ದೂರಿತು. ನಗರಾಭಿವೃದ್ಧಿ ಕಾರ್ಯದರ್ಶಿಗಳು ಪೌರಾಡಳಿತ ನಿರ್ದೇಶಕರಿಗೆ,ನಿರ್ದೇಶಕರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ,ಜಿಲ್ಲಾಧಿಕಾರಿಗಳು ಪಾಲಿಕೆಯ ಆಯುಕ್ತರಿಗೆ ವರದಿ ಕೇಳಿದ್ದಾರೆ.ನಾವು ಯಾರ ವಿರುದ್ಧ ನೂರು ದಿನಗಳ ಹೋರಾಟ ಮಾಡುತ್ತ ಬಂದಿದೇವೆಯೋ ಅವರ ವರದಿ ಕೇಳಿದ್ದು ಸರಿಯಲ್ಲ.ಜುಲೈ 8 ರಂದು
ಮುಂಬೈಯಲ್ಲಿ ಅಲ್ಲಿಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಗಡಿವಿವಾದ ಸಂಬಂಧ ಉನ್ನತಾಧಿಕಾರ ಸಮಿತಿಯ ಸಭೆ ನಡೆಯಲಿದ್ದು ಯಾವದೇ ಸಮಯದಲ್ಲೂ ಸುಪ್ರೀಂ ಕೋರ್ಟಿನ ಮುಂದೆ ಗಡಿವಿವಾದ ಪ್ರಕರಣ ವಿಚಾರಣೆಗೆ ಬರಲಿದೆ ಎಂದು ತಿಳಿಸಿತು.ಬೆಳಗಾವಿ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿ ಪಾಸಾದರೆ ಅದನ್ನು ಕರ್ನಾಟಕ ಪರವಾಗಿ ಕೋರ್ಟಿನಲ್ಲಿ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ವಿವರಿಸಿತು.
ಗಡಿವಿವಾದ ಪ್ರಕರಣ ರಾಜ್ಯದ ಹಿತಾಸಕ್ತಿಯಿಂದ ಮುಖ್ಯವಾಗಿದ್ದು ಬೆಳಗಾವಿ ಪಾಲಿಕೆಯಲ್ಲಿ ಗೊತ್ತುವಳಿ ಸ್ವೀಕಾರವು ಸಹ ಮಹತ್ವದ್ದು ಎನಿಸಿದೆ.ರಾಜ್ಯ ಸರಕಾರ ನೀಡುವ ಸೂಚನೆಗಳನ್ನು ಪಾಲಿಕೆಯು
ಅನುಸರಿಸದಿದ್ದರೆ ಪಾಲಿಕೆಯನ್ನು ಕಿತ್ತು ಹಾಕಬಹುದು ಎಂದು ನಿಯೋಗ ಸಲಹೆ ನೀಡಿತು.
ನಿಯೋಗದ ಜೊತೆಗೆ ನಡೆದ ಚರ್ಚೆಯ ನಂತರ ಸಚಿವರು ಪಾಲಿಕೆಯ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು ಬೆಂಗಳೂರಿಗೆ ಮರಳಿದ ನಂತರ ಸರಕಾರದ ಮಟ್ಟದಲ್ಲಿ ಇದನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಪಾಲಿಕೆಯ ಗೊತ್ತುವಳಿಯ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯನ್ನು ಕನ್ನಡ ಸಂಘಟನೆಗಳು ಸ್ವಾಗತಿಸಿದ್ದು ಸೋಮವಾರ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಕಳಿಸುವ ವರದಿಯನ್ನು ನೋಡಿಕೊಂಡು ಬೆಂಗಳೂರಿಗೆ ನಿಯೋಗ ಒಯ್ದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಗರಾಭಿವೃದ್ಧಿ ಖಾತೆಯ ಸಚಿವರು,ಮುಖ್ಯ
ಕಾರ್ಯದರ್ಶಿಗಳನ್ನು ಭೇಟಿಯಾಗಲು ನಿರ್ಧರಿಸಿವೆ.
ನಿಯೋಗದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ,ನಗರ ಸೇವಕ ರಮೇಶ ಸೊಂಟಕ್ಕೆ,ಕನ್ನಡ ಮುಖಂಡರಾದ ಮಲ್ಲಪ್ಪ ಗುಡಗೇನಟ್ಟಿ,ಎಸ್.ಎಸ್.ಮೂಕನವರ ಇದ್ದರು.