ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಸಾವಿರಾರು ಕೋಟಿ ರೂಪಾಯಿಗಳ ದೊಡ್ಡ ಹಗರಣದ ತನಿಖೆ ಪ್ರಗತಿಯಲ್ಲಿದೆ. ಈ ನಡುವೆ ಬೆಳಗಾವಿ ನಗರದಲ್ಲಿ ಮತ್ತೊಂದು ಕಂಪನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭಾಗ್ಯ ನಗರದಲ್ಲಿರುವ ‘ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಚೇರಿ ಮೇಲೆ ಎಸಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿ ನಡೆಸುತ್ತಿದ್ದಂತೆ ಕಂಪನಿಯ ಆಡಳಿತ ಮಂಡಳಿ, ತಕ್ಷಣವೇ ತನ್ನ ಅಧಿಕೃತ ವೆಬ್ಸೈಟ್ ಅನ್ನು ಸ್ಥಗಿತಗೊಳಿಸಿದೆ.
ಮಹಾರಾಷ್ಟ್ರ ಮೂಲದ ಬಲರಾಮ ಮಾನೆ ಎಂಬಾತ ಈ ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸೂತ್ರಧಾರ. ರಾಜ್ಯದ ವಿವಿಧೆಡೆ ಒಟ್ಟು 7 ಬ್ರಾಂಚ್ಗಳನ್ನು ತೆರೆದು ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.
ಕಳೆದ 8 ವರ್ಷಗಳಿಂದ ಬೆಳಗಾವಿಯಲ್ಲಿ ಯಾರಿಗೂ ಸಂಶಯ ಬಾರದಂತೆ ವ್ಯವಹಾರ ನಡೆಸುತ್ತಿದ್ದ ಈ ಸಂಸ್ಥೆ ಅಧಿಕಾರಿಗಳ ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ನಿರ್ವಹಣೆ ನೆಪ ಹೂಡಿ ತನ್ನ ಸರ್ವರ್ ಅನ್ನು ಕಂಪ್ಲೇಟ್ ಆಗಿ ಡೌನ್ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದಾಳಿ ವೇಳೆ ಆನ್ಲೈನ್ ಮೂಲಕ ನೂರಾರು ಕೋಟಿ ರೂಪಾಯಿಗಳ ಬೃಹತ್ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಸಾರ್ವಜನಿಕರಿಗೆ ಒಂದು ಲಕ್ಷ ರೂಪಾಯಿ ಹೂಡಿಕೆಗೆ ತಿಂಗಳಿಗೆ 3 ಸಾವಿರ ರೂಪಾಯಿಗಳ ಭಾರಿ ಬಡ್ಡಿ ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು.
ಈ ಆಸೆಗೆ ಬಿದ್ದ ಸಾವಿರಾರು ಜನರು ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದಾರೆ. ಸದ್ಯ ಕಚೇರಿಯಲ್ಲಿದ್ದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಹಣದ ಮೂಲದ ತಪಾಸಣೆಗೆ ಮುಂದಾಗಿದ್ದಾರೆ.
