ತಿರುವನಂತಪುರ: ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಭಾನುವಾರ ಇಲ್ಲಿ ನಡೆದ ಯುಡಿಎಫ್ ಸಭೆಯಲ್ಲಿ ಹೊಸ ಸರ್ಕಾರದ ಸಚಿವ ಸಂಪುಟ ಸ್ಥಾನಗಳನ್ನು ಅಂತಿಮಗೊಳಿಸಲಾಯಿತು. ಖಾತೆ ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಕಾಂಗ್ರೆಸ್ನ ಹಿರಿಯ ಮುಖಂಡರಾದ ರಮೇಶ್ ಚೆನ್ನಿತ್ತಲ, ಕೆ.ಮುರಳೀಧರನ್, ಸಣ್ಣಿ ಜೋಸೆಫ್ ಸಹ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಗೆದ್ದಿದೆ. ಸಚಿವ ಸ್ಥಾನಕ್ಕೆ ಅರ್ಹರು ಅನೇಕರಿದ್ದರೂ ಎಲ್ಲರಿಗೂ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಪಕ್ಷವು ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನ, ಮಿತ್ರ ಪಕ್ಷಗಳ ಅಭಿಪ್ರಾಯ ಸೇರಿ ಹಲವು ಸಂಗತಿಗಳನ್ನು ಪರಿಗಣಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ’ ಎಂದರು.
‘ಖಾತೆ ಹಂಚಿಕೆಗೆ ಸಂಬಂಧಿಸಿ ಯುಡಿಎಫ್ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಿ ಬಹುತೇಕ ಅಂತಿಮಗೊಳಿಸಿದ್ದೇವೆ. ಸಣ್ಣ ಪುಟ್ಟ ಬದಲಾವಣೆಗಳಷ್ಟೇ ಬಾಕಿ ಉಳಿದಿದೆ’ ಎಂದರು.
ಅಂತಿಮ ಪಟ್ಟಿಯನ್ನು ಔಪಚಾರಿಕವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ. ಅನುಮೋದನೆ ನಂತರ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗುತ್ತದೆ.
ರಾಧಾಕೃಷ್ಣನ್ ಸ್ಪೀಕರ್
ತಿರುವಂಚೂರ್ ರಾಧಾಕೃಷ್ಣನ್ ಅವರನ್ನು ಸಭಾಪತಿ ಹಾಗೂ ಶಾನಿಮೋಳ್ ಉಸ್ಮಾನ್ ಅವರನ್ನು ಉಪ ಸಭಾಪತಿಯಾಗಿ ನೇಮಿಸಲು ಯುಡಿಎಫ್ ನಿರ್ಧರಿಸಿದೆ.
ಚರ್ಚ್ ಮುಖ್ಯಸ್ಥರ ಭೇಟಿ
ತಿರುವನಂತಪುರ: ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಭಾನುವಾರ ಇಲ್ಲಿನ ಪಟ್ಟೋಮ್ನಲ್ಲಿರುವ ಬಿಷಪ್ ಹೌಸ್ನಲ್ಲಿ ಸೀರೊ-ಮಲಂಕರ ಕ್ಯಾಥೋಲಿಕ್ ಚರ್ಚ್ನ ಆರ್ಚ್ ಬಿಷಪ್ ಮಾರ್ ಬಸಲಿಯೋಸ್ ಕ್ಲೀಮಿಸ್ ಬಾವ ಅವರನ್ನು ಭೇಟಿಯಾದರು.
ಕೇರಳಂನ ನೂತನ ಮುಖ್ಯಮಂತ್ರಿಯಾಗಿ ತಮ್ಮ ಹೆಸರನ್ನು ಎಐಸಿಸಿ ಆಯ್ಕೆ ಮಾಡಿದ ನಂತರ ಸತೀಶನ್ ಅವರು ರಾಜ್ಯದ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದಾರೆ.
ಬಿಷಪ್ ಹೌಸ್ಗೆ ಬಂದ ಸತೀಶನ್ ಅವರನ್ನು ಧರ್ಮಗುರು ಕ್ಲೀಮಿಸ್ ಅವರು ಪ್ರವೇಶದ್ವಾರದಲ್ಲೇ ಸ್ವಾಗತಿಸಿದರು. ನಂತರ ಚಹಾ ಸೇವನೆಯೊಂದಿಗೆ ಇಬ್ಬರೂ ಅರ್ಧ ಗಂಟೆ ಚರ್ಚೆ ನಡೆಸಿದರು. ಇದೇ ವೇಳೆ ಸತೀಶನ್ ಅವರನ್ನು ಅಭಿನಂದಿಸಿದ ಕ್ಲೀಮಿಸ್, ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುವಂತೆ ಶುಭ ಕೋರಿದರು.
ನಂತರ ಇಬ್ಬರೂ ಒಟ್ಟಿಗೆ ವರದಿಗಾರರನ್ನು ಭೇಟಿಯಾದರು. ‘ಈ ಭೇಟಿಯಲ್ಲಿ ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ ಚರ್ಚಿಸಲಾಗಿ ದೆಯೇ’ ಎಂದು ಕ್ಲೀಮಿಸ್ ಅವರನ್ನು ಸುದ್ದಿಗಾರರು ಕೇಳಿದರು. ‘ಸತೀಶನ್ ಅವರಿನ್ನೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದ ಕಾರಣ, ಅಂತಹ ಯಾವುದೇ ಚರ್ಚೆಗಳನ್ನು ನಡೆದಿಲ್ಲ’ ಎಂದು ಕ್ಲೀಮಿಸ್ ಪ್ರತಿಕ್ರಿಯಿಸಿದರು.
‘ಮುಖ್ಯಮಂತ್ರಿಯಾಗಿ ನೇಮಕವಾದ ಮೇಲೆ ಸತೀಶನ್ ಅವರು ಇದನ್ನು ‘ದೇವರ ಇಚ್ಛೆ’ ಎಂದು ಬಣ್ಣಿಸಿದ್ದಾರೆ. ನಾವೂ ಅದನ್ನು ಹಾಗೆಯೇ ನಂಬುತ್ತೇವೆ’ ಎಂದು ಕ್ಲೀಮಿಸ್ ಹೇಳಿದರು. ಸತೀಶನ್ ಮತ್ತು ಅವರ ಪೂರ್ಣ ಸಚಿವ ಸಂಪುಟ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದೆ.
ಖರ್ಗೆ, ರಾಹುಲ್, ಪ್ರಿಯಾಂಕಾ ಭಾಗಿ
ನವದೆಹಲಿ: ತಿರುವನಂತಪುರದಲ್ಲಿ ಸೋಮವಾರ ನಡೆಯಲಿರುವ ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಯನಾಡ್ ಸಂಸದೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸುತ್ತಿರುವ ಕುರಿತು ಖಚಿತ ಮಾಹಿತಿ ಇಲ್ಲ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳೂ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ ಅವರನ್ನೂ ಕಾರ್ಯಕ್ರಮಕ್ಕೆ ಪಕ್ಷ ಆಹ್ವಾನಿಸಿದೆ. ಆದರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುರಿತು ಅವರಿನ್ನೂ ಖಚಿತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
‘ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವ ಸಮಾರಂಭದಲ್ಲಿ ಸತೀಶನ್ ತಮ್ಮ ಕೆಲವು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಲೀಗ್ಗೆ 5 ಸ್ಥಾನ
ಯುಡಿಎಫ್ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ (ಐಯುಎಂಎಲ್) ಐವರಿಗೆ ಸ್ಥಾನ ಲಭಿಸಲಿದೆ. ಪಿ.ಕೆ. ಕುಂಞಾಲಿಕುಟ್ಟಿ, ಎನ್.ಶಂಸುದ್ದೀನ್, ಕೆ.ಎಂ.ಶಾಜಿ, ಪಿ.ಕೆ ಬಶೀರ್ ಮತ್ತು ವಿ.ಇ ಅಬ್ದುಲ್ ಗಫೂರ್ ಅವರಿಗೆ ಕೇರಳಂನ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಿದೆ ಎಂದು ಐಯುಎಂಎಲ್ ಮುಖಂಡ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಗಳ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
