ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಾರ್ಟಿಯ (AAP) ಪ್ರಭಾವಿ ನಾಯಕ ರಾಘವ ಚಡ್ಡಾ ನೇತೃತ್ವದಲ್ಲಿ ಏಳು ಮಂದಿ ರಾಜ್ಯಸಭಾ ಸಂಸದರು ಪಕ್ಷಕ್ಕೆ ವಿದಾಯ ಹೇಳಿ ಭಾರತೀಯ ಜನತಾ ಪಾರ್ಟಿ (BJP) ಜೊತೆ ವಿಲೀನವಾಗಿದ್ದಾರೆ. ಈ ಬೆಳವಣಿಗೆಯು ಪಾರ್ಲಿಮೆಂಟ್ನಲ್ಲಿ ಎಎಪಿಯ ಬಲವನ್ನು ಕುಗ್ಗಿಸಿರುವುದು ಮಾತ್ರವಲ್ಲದೆ, 2027ರ ಪಂಜಾಬ್ ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ಎಎಪಿಯ ಆಂತರಿಕ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ.
ಪಕ್ಷಾಂತರ ಮಾಡಿದ ಏಳು ಸಂಸದರಲ್ಲಿ ಆರು ಮಂದಿ ಪಂಜಾಬ್ನವರಾಗಿದ್ದರೆ, ಒಬ್ಬರು ದೆಹಲಿಯವರಾಗಿದ್ದಾರೆ. ಇದು ಕೇವಲ ದಿಢೀರ್ ನಿರ್ಧಾರವಲ್ಲ, ಬದಲಿಗೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದ ಆಂತರಿಕ ಅಸಮಾಧಾನದ ಫಲಶ್ರುತಿ ಎಂದು ಹೇಳಲಾಗುತ್ತಿದೆ.
ಬಂಡಾಯದ ಕಿಚ್ಚು ಹಚ್ಚಿದ್ದು ಯಾವುದು?
ಏಪ್ರಿಲ್ 5 ರಂದು ಎಎಪಿ ನಾಯಕತ್ವವು ರಾಘವ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಪದಚ್ಯುತಗೊಳಿಸಿದಾಗ ಈ ಬಿರುಕು ಅಧಿಕೃತವಾಗಿ ಶುರುವಾಯಿತು. ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷದ ಹೈಕಮಾಂಡ್ ಮತ್ತು ಚಡ್ಡಾ ನಡುವಿನ ಅಂತರ ಹೆಚ್ಚಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿತ್ತು. ರಾಜ್ಯ ಸಭೆಯಲ್ಲಿ ತನ್ನ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ಚಡ್ಡಾ ಅವರು ಇತರ ಅತೃಪ್ತ ಸಂಸದರನ್ನು ಸಂಪರ್ಕಿಸಿ, ಒಟ್ಟಾಗಿ ಪಕ್ಷ ತೊರೆಯುವ ಬಗ್ಗೆ ಮಾತುಕತೆ ನಡೆಸಿದ್ದರು.
ಅನರ್ಹತೆಯಿಂದ ಪಾರಾಗಲು ‘ಮೂರನೇ ಎರಡರಷ್ಟು’ ಸಂಖ್ಯಾಬಲ ಬೇಕಿತ್ತು…
ರಾಜ್ಯಸಭೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿದ್ದು, ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹಗೊಳ್ಳುವುದನ್ನು ತಪ್ಪಿಸಲು ಕನಿಷ್ಠ 7 ಸಂಸದರ (ಮೂರನೇ ಎರಡರಷ್ಟು) ಬೆಂಬಲ ಅಗತ್ಯವಿತ್ತು. ಚಡ್ಡಾ ಈ ಸಂಖ್ಯಾಬಲವನ್ನು ನಿಖರವಾಗಿ ತಲುಪುವಲ್ಲಿ ಯಶಸ್ವಿಯಾದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವ ಚಡ್ಡಾ, “ನಮಗೆ ರಾಜ್ಯಸಭೆಯ ಮೂರನೇ ಎರಡರಷ್ಟು ಸಂಸದರ ಬೆಂಬಲವಿದೆ. ನಾವೆಲ್ಲರೂ ಸಹಿ ಮಾಡಿದ ಪತ್ರಗಳನ್ನು ಈಗಾಗಲೇ ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸಲ್ಲಿಸಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ರಾಘವ ಛಡ್ಡಾ, ಸಂದೀಪ ಪಾಠಕ್ ಮತ್ತು ಸ್ವಾತಿ ಮಲಿವಾಲ್ ಅವರಂತಹ ದೀರ್ಘಕಾಲದಿಂದ ಎಎಪಿಯಲ್ಲಿರುವ ನಾಯಕರು ಸಂಸತ್ತನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ಪಕ್ಷದ ಸಂಘಟನಾ ಶ್ರೇಣಿಯ ಮೂಲಕ ಏರಿದವರಾಗಿದ್ದಾರೆ.
ಅಶೋಕ ಮಿತ್ತಲ್, ವಿಕ್ರಮಜೀತ ಸಾಹ್ನಿ ಮತ್ತು ರಾಜೇಂದ್ರ ಗುಪ್ತಾ ಅವರಂತಹ ವ್ಯವಹಾರ ಮತ್ತು ರಾಜಕೀಯೇತರ ಹಿನ್ನೆಲೆಯ ನಾಯಕರು ಎಎಪಿಗೆ ಆರ್ಥಿಕ ಮತ್ತು ವೃತ್ತಿಪರ ಪ್ರಭಾವವನ್ನು ತಂದಿದ್ದರು. ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ರಾಜಕೀಯೇತರ ವರ್ಗಕ್ಕೆ ಸೇರುತ್ತಾರೆ. ಪಕ್ಷದ ವ್ಯವಹಾರಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಸೀಮಿತವಾಗಿತ್ತು ಮತ್ತು ಮೂಲಗಳು ಸೂಚಿಸುವಂತೆ ಅವರು ಬಿಜೆಪಿ ಜೊತೆ ಸೇರುವುದು ತಮ್ಮ ವೃತ್ತಿಪರ ದಾರಿಗೆ ಹೆಚ್ಚು ಅನುಕೂಲಕರವೆಂದು ಪರಿಗಣಿಸಿದ್ದಾರೆ.
ಪಕ್ಷದ ಹಿರಿಯ ಮುಖಗಳಾದ ರಾಘವ ಚಡ್ಡಾ, ಸಂದೀಪ ಪಾಠಕ್ ಮತ್ತು ಸ್ವಾತಿ ಮಲಿವಾಲ್ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇವರು ಪಕ್ಷದಿಂದ ನಿರ್ಗಮಿಸಿರುವುದು ಪಕ್ಷದ ಸಂಘಟನೆ ದೃಷ್ಟಿಯಿಂದ ಎಎಪಿಗೆ ಹಿನ್ನಡೆ ಎಂದು ಹೇಳಬಹುದಾಗಿದೆ. ಇನ್ನು ಅಶೋಕ ಮಿತ್ತಲ್ ಅವರ ಮೇಲೆ ಇತ್ತೀಚೆಗೆ ಇ.ಡಿ ದಾಳಿ ನಡೆದಿತ್ತು ಹಾಗೂ ರಾಜೇಂದ್ರ ಗುಪ್ತಾ ಆದಾಯ ತೆರಿಗೆ ಇಲಾಖೆಯ ಸ್ಕ್ಯಾನರ್ನಲ್ಲಿದ್ದರು. ಈ ಒತ್ತಡಗಳೂ ಕೂಡ ಪಕ್ಷಾಂತರಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಮೂಲಗಳ ಪ್ರಕಾರ, ಈ ಪಕ್ಷಾಂತರ ಪ್ರಕ್ರಿಯೆಯು ದೀಪಾವಳಿ ಅಥವಾ ಆಗಸ್ಟ್ ತಿಂಗಳಿನಲ್ಲಿ ನಡೆಯಬೇಕಿತ್ತು. ಆದರೆ ಚಡ್ಡಾ ಅವರನ್ನು ಪದಚ್ಯುತಗೊಳಿಸಿದ ನಿರ್ಧಾರವು ಈ ಪ್ರಕ್ರಿಯೆಯನ್ನು ವೇಗಗೊಳಿಸಿತು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಪ್ರಚಾರ ನಡೆಸಲು ಬಿಜೆಪಿಗೆ ಇದು ದೊಡ್ಡ ಶಕ್ತಿ ನೀಡಲಿದೆ.
ಸುದ್ದಿಗೋಷ್ಠಿಯಲ್ಲಿ ಭಾವುಕರಾದ ರಾಘವ ಚಡ್ಡಾ, “ನನ್ನ 15 ವರ್ಷಗಳ ಯೌವನವನ್ನು ಧಾರೆ ಎರೆದು ಕಟ್ಟಿದ ಎಎಪಿ ಇಂದು ತನ್ನ ತತ್ವಗಳಿಂದ ವಿಮುಖವಾಗಿ ದಾರಿ ತಪ್ಪಿದೆ. ನಾನು ‘ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ’ ಎಂದು ನನಗೆ ಕಳೆದ ಕೆಲವು ವರ್ಷಗಳಿಂದ ಅನಿಸುತ್ತಿತ್ತು,” ಎಂದಿದ್ದಾರೆ. ಸಂದೀಪ ಪಾಠಕ್ ಕೂಡ ಹತ್ತು ವರ್ಷಗಳ ಸಂಬಂಧವನ್ನು ಅನಿವಾರ್ಯವಾಗಿ ಕಡಿದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಘೋಷಣೆಯ ಸಮಯದಲ್ಲಿ ಏಳು ಸಂಸದರಲ್ಲಿ ಮೂವರು ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮೂಲಗಳ ಪ್ರಕಾರ, ಸ್ವಾತಿ ಮಲಿವಾಲ್ ಈಶಾನ್ಯ ಪ್ರವಾಸದಲ್ಲಿದ್ದಾರೆ. ಹರ್ಭಜನ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜೇಂದ್ರ ಗುಪ್ತಾ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿದ್ದಾರೆ.
ವಿಕ್ರಮಜೀತ ಸಾಹ್ನಿ ದೆಹಲಿಯಲ್ಲಿದ್ದಾರೆ ಆದರೆ ಪತ್ರಿಕಾಗೋಷ್ಠಿಗೆ ಬಾರದೇ ಇರಲು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ನಾಲ್ವರ ಅನುಪಸ್ಥಿತಿಯ ಹೊರತಾಗಿಯೂ, ಎಲ್ಲಾ ಏಳು ಸಂಸದರು ಈ ಕ್ರಮವನ್ನು ಔಪಚಾರಿಕವಾಗಿ ಅನುಮೋದಿಸಿದ್ದಾರೆ ಮತ್ತು ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ರಾಘವ ಚಡ್ಡಾ ಪ್ರತಿಪಾದಿಸಿದ್ದಾರೆ.
ಬಿಜೆಪಿಯಿಂದ ಅದ್ಧೂರಿ ಸ್ವಾಗತ..
ಬಿಜೆಪಿ ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಅವರು ಸಂಸದರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. “ನರೇಂದ್ರ ಮೋದಿ ಅವರ ‘ವಿಕಸಿತ ಭಾರತ 2047’ ಗುರಿಯತ್ತ ಕೆಲಸ ಮಾಡಲು ಇವರು ನಮ್ಮೊಂದಿಗೆ ಸೇರಿರುವುದು ಸಂತಸ ತಂದಿದೆ,” ಎಂದು ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಸಭಾ ಸಭಾಪತಿಗಳು ಈ ವಿಲೀನವನ್ನು ಅಂಗೀಕರಿಸಿದ ನಂತರ, ಈ ಏಳು ಸಂಸದರು ಅಧಿಕೃತವಾಗಿ ಬಿಜೆಪಿಯ ಸದಸ್ಯರಾಗಲಿದ್ದಾರೆ. ಇತ್ತ ಎಎಪಿಯಲ್ಲಿ ಈಗ ಸಂಜಯ್ ಸಿಂಗ್, ಬಲ್ಬೀರ್ ಸಿಂಗ್ ಸೀಚೆವಾಲ್ ಮತ್ತು ನಾರಾಯಣ ದಾಸ್ ಗುಪ್ತಾ ಮಾತ್ರ ಉಳಿದುಕೊಂಡಿದ್ದಾರೆ.