ನವದೆಹಲಿ: ಕೇಂದ್ರ ಸರ್ಕಾರದ ಭರವಸೆಯ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಗುರುವಾರ ಮಧ್ಯರಾತ್ರಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರು ವಾಂಗ್ಚೂಕ್ ಅವರನ್ನು ಭೇಟಿಯಾಗಿ ಸರ್ಕಾರದ ಭರವಸೆಗಳ ಕುರಿತು ಚರ್ಚಿಸಿದರು. ಇದಾದ ಬಳಿಕ ಸೊನಮ್ ಉಪವಾಸ ಕೈಬಿಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸೊನಮ್, 'ಕೇಂದ್ರ ಸಚಿವಾರದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಹಾಗೂ ಲೇಹ್-ಲಡಾಖ್ನ ಹಿರಿಯ ನಾಯಕರ ಸಮ್ಮುಖದಲ್ಲಿ 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದ್ದೇನೆ. ಇದಕ್ಕೂ ಮುನ್ನ ವಿವಿಧ ರಾಜಕೀಯ ಪಕ್ಷಗಳ 65 ಸಂಸದರು ಭೇಟಿಯಾಗಿ ಉಪವಾಸವನ್ನು ಕೈಬಿಡುವಂತೆ ಕೋರಿ ಪತ್ರಗಳಿಗೆ ಸಹಿ ಹಾಕಿದ್ದರು. ದೇಶದಲ್ಲಿ ಸಂಭವಿಸಬಹುದಾದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಹಾಗೂ ವಿವಿಧ ಷರುತ್ತಗಳ ಕುರಿತು ಸುದೀರ್ಘ ಮಾತುಕತೆಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
'ಈ ಷರತ್ತುಗಳ ಬಗ್ಗೆ ನಾನು ಶೀಘ್ರದಲ್ಲೇ ಪ್ರತ್ಯೇಕ ವಿಡಿಯೊದಲ್ಲಿ ವಿವರವಾಗಿ ತಿಳಿಸುತ್ತೇನೆ. ಎಲ್ಲಿಯೂ ಯಾವುದೇ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಅತ್ಯಂತ ಜಾಗರೂಕರಾಗಿರುವಂತೆ ನಿಮ್ಮೆಲ್ಲರನ್ನು ಕೋರುತ್ತೇನೆ' ಎಂದು ಮನವಿ ಮಾಡಿದ್ದಾರೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಯಾವುದೇ ಹೊಸ ಪ್ರಕರಣ ದಾಖಲಿಸದಿರಲು ಮತ್ತು ನೀಟ್ ಸೇರಿದಂತೆ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸುಧಾರಣೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ಕೇಂದ್ರವು ಭರವಸೆ ನೀಡಿದೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿದೆ.
ಸೊನಮ್ ವಾಂಗ್ಚೂಕ್ ಉಪವಾಸ ಹಿಂಪಡೆದಿರುವುದು 'ನೆಮ್ಮದಿ ಮತ್ತು ಕೃತಜ್ಞತೆ ತಂದಿದೆ' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಕ್ರಿಯಿಸಿದೆ. ಆದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಭರವಸೆಗಳುಪ್ರಕರಣಗಳ ಹಿಂಪಡೆಯುವಿಕೆ: ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸಿದವರು ಹಾಗೂ ಸಂಸತ್ ಚಲೋದಲ್ಲಿ ಭಾಗವಹಿಸಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸದಿರಲು ಸಕಾರಾತ್ಮಕ ನಿರ್ಧಾರ.ಸಂಸತ್ತಿನಲ್ಲಿ ಚರ್ಚೆ: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಳ ಬಗ್ಗೆ ಈಗಾಗಲೇ ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ಭರವಸೆ.ಪರಿಹಾರ ಪರಿಗಣನೆ: ಇತ್ತೀಚಿನ ನೀಟ್ (NEET) ಪತ್ರಿಕೆ ಸೋರಿಕೆ ಪ್ರಕರಣದಿಂದ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸಕಾರಾತ್ಮಕ ಯೋಚನೆ.