ಚಿಂಚೋಳಿ (ಕಲಬುರಗಿ ಜಿಲ್ಲೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದ ಬಸ್ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಓಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಕಲಬುರಗಿಯಿಂದ ಚಿಂಚೋಳಿಗೆ ಬರುವ ಬಸ್ಸಿನ ಹೆಡ್ಲೈಟ್ನ ಮಂದ ಬೆಳಕಿನ ಕಾರಣ ಮೊಬೈಲ್ ಟಾರ್ಚ್ ಹಾಕಿಕೊಂಡು ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಬಸ್ ತಡರಾತ್ರಿ ಚಿಂಚೋಳಿ ತಲುಪಿತು. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್ ಕಳೆದ ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ಓಡಿಸುತ್ತಿರುವುದು ಗೋಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
‘ಕಲಬುರಗಿಯಿಂದ ಚಿಂಚೋಳಿಗೆ ಬರುವ ದಿನದ ಕಡೆಯ(ಲಾಸ್ಟ್) ಬಸ್ ಇದಾಗಿದ್ದು, ನಿತ್ಯ ಸಂಚರಿಸುವವರು ಇದೇ ಬಸ್ ಅವಲಂಬಿಸಿದ್ದಾರೆ. ಆದರೆ, ಬಸ್ಸಿನ ಸ್ಥಿತಿಮಾತ್ರ ಅಯೋಮಯವಾಗಿದೆ’ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
‘ಕಲಬುರಗಿಯಿಂದ ಚಿಂಚೋಳಿಗೆ ಬರುವ ಲಾಸ್ಟ್ ಬಸ್ಸಿನ ಲೈಟ್ ಮಂದವಾಗಿ ಬೆಳಗುತ್ತಿರುವುದರಿಂದ ನಿರ್ವಾಹಕನ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಂಚೋಳಿಗೆ ಬಸ್ ಓಡಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ಬಸ್ಸಿನ ಹೆಡ್ಲೈಟ್ ತಂತಿಗಳ ಜೋಡಣೆಯಲ್ಲಿ ದೋಷವಿತ್ತು. ಸರಿಪಡಿಸಿದ್ದೇವೆ. ಆದರೆ, ಶನಿವಾರ ಲೈಟ್ಗಳು ಬೆಳಗದೇ ಇರುವ ಕುರಿತು ಪ್ರಯಾಣಿಕರೇ ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ನೋಡಿ ಸಂಸ್ಥೆಯ ಉನ್ನತ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ಈ ಬಸ್ ಬದಲಿಸಿ ಬೇರೆ ಬಸ್ ಹಾಕುತ್ತೇನೆ’ ಎಂದು ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ ಪ್ರತಿಕ್ರಿಯಿಸಿದ್ದಾರೆ.
‘ಮೊಬೈಲ್ ಟಾರ್ಚ್ ಬೆಳಿಕಿನಲ್ಲಿ ಬಸ್ ಓಡಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಮಾರುತಿ ಗಂಜಗಿರಿ ದೂರಿದ್ದಾರೆ.
‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಖರೀದಿಸಿದ ಬಸ್ಗಳನ್ನು ಕಲ್ಯಾಣ ಕರ್ನಾಟಕದ ಎಲ್ಲಾ ಘಟಕಗಳಿಗೆ ನೀಡಲಾಗಿದೆ. ಆದರೆ, ಚಿಂಚೋಳಿ ಮತಕ್ಷೇತ್ರದ ವ್ಯಾಪ್ತಿಯ ಘಟಕಗಳಿಗೆ ನೀಡದೇ ಮಲತಾಯಿ ಧೋರಣೆ ತಾಳಲಾಗಿದೆ. ಇದರಿಂದ ಅಧಿಕಾರಿಗಳು ಗುಜರಿಗೆ ಹಾಕುವ ಬಸ್ ಓಡಿಸುವುದು ಅನಿವಾರ್ಯವಾಗಿದ್ದು, ಪ್ರಯಾಣಿಕರು ಹಿಡಿ ಶಾಪಹಾಕುತ್ತಲೇ ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ’ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ ಆರೋಪಿಸಿದ್ದಾರೆ.