ಮಡಿಕೇರಿ: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ದಿಢೀರ್ ಸಂಭವಿಸಿದ ಸಾಕಾನೆಗಳ ನಡುವಿನ ಕಾಳಗದ ಮಧ್ಯೆ ಸಿಲುಕಿದ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಆನೆಯಡಿ ಸಿಲುಕಿ ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಾರೆ.
ಚೆನ್ನೈ ಮೂಲದ ಜ್ಯುನೇಶ್ (33) ಮೃತಪಟ್ಟ ದುರ್ದೈವಿ ಮಹಿಳಾ ಪ್ರವಾಸಿ ಎಂದು ಗುರುತಿಸಲಾಗಿದೆ. ಮೃತ ಜ್ಯುನೇಶ್ ಅವರು ದುಬಾರೆ ಆನೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯವನ್ನು ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದ ಸಂದರ್ಭದಲ್ಲಿ ‘ಕಾಂಚನ್’ ಹೆಸರಿನ ಆನೆಯು ‘ಮಾರ್ತಾಂಡ’ ಎಂಬ ಮತ್ತೊಂದು ಆನೆಯ ಮೇಲೆ ದಿಢೀರನೆ ದಾಳಿ ಮಾಡಿದೆ. ಆನೆಗಳ ನಡುವೆ ಭೀಕರ ಕಾಳಗ ಆರಂಭವಾಗುತ್ತಿದ್ದಂತೆ ಗಾಬರಿಗೊಂಡ ಮಾವುತರು ಅವುಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರಾದರೂ, ಆನೆಗಳು ಮಾವುತರ ಕೈಗೆ ಸಿಗದೆ ಅತಿರೇಕಕ್ಕೆ ಹೋಗಿವೆ.
ಕಾಳಗದ ವೇಳೆ ಸಮತೋಲನ ಕಳೆದುಕೊಂಡ ಮಾರ್ತಾಂಡ ಹೆಸರಿನ ಆನೆ ಪಕ್ಕದಲ್ಲೇ ನಿಂತಿದ್ದ ಜ್ಯುನೇಶ್ ಅವರ ಮೇಲೆ ಬಿದ್ದಿದೆ. ಈ ವೇಳೆ ನೆಲಕ್ಕೆ ತಲೆ ಅಪ್ಪಳಿಸಿದ್ದರಿಂದ ಜ್ಯುನೇಶ್ ತೀವ್ರವಾಗಿ ಗಾಯಗೊಂಡಿರು. ನಂತರ ನೆಲಕ್ಕೆ ಬಿದ್ದ ಆನೆ ‘ಮಾರ್ತಾಂಡ’ ಮೇಲೇಳಲು ಸತತ ಪ್ರಯತ್ನ ನಡೆಸುವಾಗ, ಅದರ ಕಾಲಡಿಗೆ ಸಿಲುಕಿದ ಜ್ಯುನೇಶ್ ತೀವ್ರವಾಗಿ ಜಜ್ಜಲ್ಪಟ್ಟು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೊದಲ್ಲಿ ಈ ಘಟನೆ ಸೆರೆಯಾಗಿದೆ. ಆನೆಗಳ ನಡುವಿನ ಕಾದಾಟ ಮುಂದುವರಿದಂತೆ, ಅವುಗಳಲ್ಲಿ ಒಂದು ಆನೆ ಸಮತೋಲನ ಕಳೆದುಕೊಂಡು ಮಹಿಳೆಯ ಮೇಲೆ ಬಿದ್ದಿದೆ. ಮಾರ್ತಾಂಡ ಆನೆ ಎದ್ದೇಳಲು ಪ್ರಯತ್ನಿಸುತ್ತಿದ್ದಾಗ, ಜ್ಯೂನೇಶ್ ಅದರ ಕಾಲಿನಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಓರ್ವ ವ್ಯಕ್ತಿ ಆನೆಯ ಕಾಲುಗಳ ಕೆಳಗೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದು ವೀಡಿಯೊದಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ತನ್ನ ಪ್ರಾಣ ಮತ್ತು ಮಗುವಿನ ಜೀವ ಎರಡನ್ನೂ ಪಣಕ್ಕಿಟ್ಟಿಟ್ಟು ಪ್ರಯತ್ನಿಸಿದರೂ ಜುನೇಶ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಕಣ್ಮುಂದೆಯೇ ನಡೆದ ಈ ಅನಾಹುತ ಕಂಡು ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದಾರೆ. ಆನೆ ಶಿಬಿರದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಘಟನೆಯ ಕುರಿತು ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿಗಳ ವಲಯದಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಕಠಿಣ ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, “ಸಾಕಾನೆಗಳಿಗೆ ಎಷ್ಟೇ ತರಬೇತಿ ನೀಡಿದ್ದರೂ, ಪ್ರಾಣಿಗಳ ವರ್ತನೆಯನ್ನು ಮುಂಚಿತವಾಗಿಯೇ ಊಹಿಸುವುದು ಅತ್ಯಂತ ಕಷ್ಟಕರ ಕೆಲಸ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸಿಗರು ಆನೆಗಳ ಸೊಂಡಿಲನ್ನು ಮುಟ್ಟುವುದು, ಆಹಾರ ನೀಡುವುದು ಹಾಗೂ ಅವುಗಳೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಆನೆಗಳಿಗೆ ಸ್ನಾನ ಮಾಡಿಸುವಾಗ ಪ್ರವಾಸಿಗರು ಭಾಗಿಯಾಗದಂತೆ ತಡೆಯಬೇಕು. ಪ್ರವಾಸಿಗರು ಆನೆಗಳು ಸೇರಿದಂತೆ ಯಾವುದೇ ವನ್ಯಜೀವಿಗಳಿಂದ ಯಾವಾಗಲೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ಅಧಿಕಾರಿಗಳು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ದುಬಾರೆ ಶಿಬಿರದ ಈ ಘಟನೆಯು ವನ್ಯಜೀವಿ ಪ್ರವಾಸೋದ್ಯಮದಲ್ಲಿ ಸುರಕ್ಷತಾ ಕ್ರಮಗಳ ಮರುಪರಿಶೀಲನೆಯ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
