ಬೆಳಗಾವಿ : ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದ್ದು, ಮಹಿಳೆ ಅವಕಾಶಕ್ಕಾಗಿ ಕಾಯುವವಳಾಗದೇ, ತನ್ನದೇ ಆದ ಅವಕಾಶವನ್ನು ಸೃಷ್ಟಿಸುವ ಮಹಿಳೆಯಾಗಬೇಕು ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಶಿಬಿರದ ಸಂಯೋಜಕಿ ಡಾ. ಪೂಜಾ ಹಲ್ಯಾಳ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಮಹಿಳಾ ಸ್ವಯಂರಕ್ಷಣಾ ತರಬೇತಿ ಶಿಬಿರವನ್ನು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಅತ್ಯಂತ ಖಂಡನೀಯವಾಗಿವೆ. ಇಂತಹ ಘಟನೆಗಳನ್ನು ತಡೆಗಟ್ಟಲು ಮಹಿಳೆಯರಲ್ಲಿ ಜಾಗೃತಿ, ಆತ್ಮವಿಶ್ವಾಸ ಹಾಗೂ ಸ್ವಯಂರಕ್ಷಣೆಯ ಕೌಶಲ್ಯ ಬೆಳೆಸುವುದು ಅಗತ್ಯ. ಸ್ವಯಂರಕ್ಷಣಾ ತರಬೇತಿ ಮಹಿಳೆಯರಿಗೆ ಸಂಕಷ್ಟದ ಸಂದರ್ಭದಲ್ಲಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಸ್ವಯಂರಕ್ಷಣಾ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪದವಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಗದೀಶ ಗಸ್ತಿ ಮಾತನಾಡಿ, “ಶಿಕ್ಷಣ ಮಹಿಳೆಗೆ ಜ್ಞಾನ ನೀಡುತ್ತದೆ; ಸ್ವಯಂರಕ್ಷಣೆ ಆಕೆಗೆ ಧೈರ್ಯ ನೀಡುತ್ತದೆ” ಎಂದರು.
ಮಹಿಳೆಯರು ಎದುರಿಸಬಹುದಾದ ವಿವಿಧ ಭಯಭೀತ ಸನ್ನಿವೇಶಗಳ ಕುರಿತು ವಿವರಿಸಿದ ಅವರು, ಅಪಾಯಕಾರಿ ಸಂದರ್ಭಗಳನ್ನು ಸಮರ್ಥವಾಗಿ ನಿಯಂತ್ರಿಸುವ ವಿವಿಧ ಕೌಶಲ್ಯಗಳನ್ನು ಸ್ವಯಂರಕ್ಷಣಾ ತರಬೇತಿ ಮೂಲಕ ಕಲಿಯಬಹುದು. ಮಹಿಳೆಯರು ಈ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಯಕ್ಷಿತ ಯುವ ಪ್ರತಿಷ್ಠಾನದ ನಿರ್ದೇಶಕ ಶ್ರೀಪಾದ ರವಿರಾವ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಶಕ್ತಿಯ ಸ್ಥಾನಮಾನ ನೀಡಲಾಗಿದೆ. ಮಹಿಳೆ ಅಬಲೆಯಲ್ಲ, ಅವಳು ಸಬಲೆ. ಈ ಸತ್ಯವನ್ನು ಮಹಿಳೆಯರಿಗೆ ನೆನಪಿಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಜಾಗೃತಿ ಮೂಡಿಸುವುದೇ ಶಿಬಿರದ ಪ್ರಮುಖ ಉದ್ದೇಶವಾಗಿದೆ. ಸ್ವಯಂರಕ್ಷಣೆಯ ತಂತ್ರಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಸ್ವಾವಲಂಬನೆಯನ್ನು ಬೆಳೆಸುತ್ತವೆ. ಐದು ದಿನಗಳ ತರಬೇತಿ ಶಿಬಿರದಲ್ಲಿ ನಡೆಯಲಿರುವ ವಿವಿಧ ತರಬೇತಿ ಚಟುವಟಿಕೆಗಳ ಕುರಿತು ಅವರು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕಿತ್ತೂರು ರಾಣಿ ಚನ್ನಮ್ಮ ಅವರ ನಾಡಿನ ವಿದ್ಯಾರ್ಥಿನಿಯರು ಇಂದು ‘ಪುಟ್ಟ ಚನ್ನಮ್ಮ’ರಾಗುವ ಅಗತ್ಯವಿದೆ ಎಂದು ಹೇಳಿದರು.
ಭಯವನ್ನು ಗೆಲ್ಲಲು ಧೈರ್ಯ ಬೇಕು, ಧೈರ್ಯವನ್ನು ಬೆಳೆಸಲು ಸೂಕ್ತ ತರಬೇತಿ ಅಗತ್ಯ. ದೇಶದಾದ್ಯಂತ ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿನಿಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಇಂತಹ ಮಹತ್ವದ ತರಬೇತಿ ಶಿಬಿರವನ್ನು ಆಯೋಜಿಸಲು ಸಹಕರಿಸಿದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ, ಕುಲಸಚಿವರು (ಆಡಳಿತ) ಸಂತೋಷ ಕಾಮಗೌಡ, ಕುಲಸಚಿವ (ಮೌಲ್ಯಮಾಪನ) ಪ್ರೊ. ಡಿ. ಎನ್. ಪಾಟೀಲ, ಹಣಕಾಸು ಅಧಿಕಾರಿ ಎಂ. ಎ. ಸಪ್ನ ಹಾಗೂ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಸ್. ಎಂ. ಗಂಗಾಧರಯ್ಯ,
ತ್ರಿವೇಣಿ ಬಡಕನ್ನವರ, ಅಶ್ವಿನಿ ಜವಳಿಮಠ, ಮಂಜುಳಾ ಕುಸಗಲ್ಲ, ವೈಭವ ಪಾಟೀಲ, ಸ್ವಪ್ನಿಲ ಪಾಟೀಲ, ಪ್ರೊ. ರೂಪಾ ಅಕ್ಕಿ, ಪ್ರೊ. ಸುನೀಲ ಪಾಣಿ ಹಾಗೂ ಪ್ರೊ. ಮಲ್ಲಿಕಾರ್ಜುನ ಜಮಖಂಡಿ ಉಪಸ್ಥಿತರಿದ್ದರು.
ಶಿಬಿರಾರ್ಥಿ ರುತಿಕಾ ಜಾಲಿಹಾಳ ಪ್ರಾರ್ಥಿಸಿದರು. ಡಾ. ಎಸ್. ವಿ. ವಾಲಿಶೆಟ್ಟಿ ಸ್ವಾಗತಿಸಿದರು. ಪ್ರೊ. ಮಂಜುನಾಥ ಕಲಾಲ ವಂದಿಸಿದರು. ಪ್ರೊ. ಸೋನಲ ಚಿನಿವಾಲ ನಿರೂಪಿಸಿದರು.