ಖಾನಾಪುರ: ಮತದಾರರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈಗಾಗಲೇ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿ ಮತಗಟ್ಟೆಯಲ್ಲಿ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿದ್ದು, ಏಜೆಂಟರು ಮತದಾರರ ಮನೆಮನೆಗೆ ಭೇಟಿ ಮಾಡಿದ್ದಾರೆ. ವಿಶೇಷ ಪರಿಷ್ಕರಣೆ ಬಗ್ಗೆ ಹೊರಗೆ ಹೋಗಿರುವ ಮತದಾರರು ಪರಿಷ್ಕರಣೆಯ ಸಂದರ್ಭದಲ್ಲಿ ತಮ್ಮ ಸ್ವಸ್ಥಾನಗಳಿಗೆ ಮರಳಿ ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ-ಮಾರ್ಗದರ್ಶನ ಮಾಡಲಿದ್ದಾರೆ. ಉದ್ಯೋಗ ಪ್ರಯುಕ್ತ ತಾಲೂಕಿನಿಂದ ಹೊರಗೆ ಹೋಗಿರುವವರು
ಅಧಿಕಾರಿಗಳಿಗೆ ದಾಖಲೆ, ಭಾವಚಿತ್ರ ಒದಗಿಸಬೇಕು ಮತ್ತು ಮತಗಟ್ಟೆ ಅಧಿಕಾರಿ ನೀಡುವ ನಮೂನೆ ಓದಿ ಭರ್ತಿ ಮಾಡಿ ಕೊಡಬೇಕು ಎಂದರು.
ಪಕ್ಷದ ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮಾಜಿ ಶಾಸಕ ಅರವಿಂದ ಪಾಟೀಲ, ಮುಖಂಡರಾದ ಬಾಬುರಾವ್ ದೇಸಾಯಿ, ಜ್ಯೋತಿಬಾ ರೇಮಾಣಿ, ಸದಾನಂದ ಪಾಟೀಲ, ಧನಶ್ರೀ ದೇಸಾಯಿ, ಚೇತನ ಮನೇರಿಕರ, ಮಲ್ಲಪ್ಪ ಮಾರಿಹಾಳ, ಶ್ರೀಕಾಂತ ಇಟಗಿ, ಸುನೀಲ ಮಡ್ಡಿಮನಿ, ಶಿವಾನಂದ ಚಲವಾದಿ, ಸಂಜಯ ಕುಬಲ ಮತ್ತಿತರರು ಇದ್ದರು.