ಬೈಲಹೊಂಗಲ: ತಾಲೂಕಿನ ನಯಾನಗರದ ಸುಖದೇವಾನಂದ ಪುಣ್ಯಾಶ್ರಮದ ಅಭಿನಯ ಸಿದ್ಧಲಿಂಗ ಶ್ರೀಗಳ ಜನ್ಮದಿನದ ಪ್ರಯುಕ್ತ ಜೂ.1ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೋಮವಾರ ಬೆಳಗ್ಗೆ 8ಕ್ಕೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಭಕ್ತರಿಂದ ಹಣ್ಣು ಹಂಪಲ ವಿತರಣೆ, ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಯಾನಗರ ಮಠದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳವಡಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಭಕ್ತರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಲಿದೆ. ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಪುಟ್ಟ ಮಕ್ಕಳಿಗೆ ಅಭಿನವ ಸಿದ್ಧಲಿಂಗ ಶ್ರೀಗಳು ಅಕ್ಷರಭ್ಯಾಸ ಮಾಡಿಸಲಿದ್ದಾರೆ.
ಸಂಜೆ 7ಕ್ಕೆ ಮಠದ ಆವರಣದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಬಳಿಕ ಶ್ರೀಗಳ ಜನ್ಮದಿನದ ಸಭಾ ಕಾರ್ಯಕ್ರಮ, ಸಿಡಿಮದ್ದಿನ ಪ್ರದರ್ಶನ ಹಾಗೂ ಮಹಾಪ್ರಸಾದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
