ಬೆಳಗಾವಿ: ಖಾನಾಪುರ ತಾಲೂಕಿನ ನಾಗರಗಾಳಿ-ತಾವರಗಟ್ಟಿ ರೈಲ್ವೆ ನಿಲ್ದಾಣಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಮರ ಬಿದ್ದ ಪರಿಣಾಮ ಅಳ್ನಾವರ-ಲೊಂಡಾ ಮಾರ್ಗದಲ್ಲಿ ಸಂಚರಿಸುವ ರೈಲು ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿದೆ.
ಗುಡುಗು ಮಳೆಗೆ ರೈಲ್ವೆ ಹಳಿ ಪಕ್ಕದ ಸುಮಾರು 30 ಅಡಿ ಎತ್ತರದ ಮರ ನೇರವಾಗಿ ಹಳಿಗೆ ಬಿದ್ದಿದೆ. ಆ ಮಾರ್ಗದಲ್ಲಿ ಹೊರಟಿದ್ದ ಕೊಲ್ಲಾಪುರ-ತಿರುಪತಿ ಎಕ್ಸ್ ಪ್ರೆಸ್ ರೈಲು ಘಟನಾ ಸ್ಥಳದ ಬಳಿ ಬಂದು ನಿಂತಿದೆ. ತಕ್ಷಣ ಸಿಬ್ಬಂದಿ ಆಗಮಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸಿ ಒಂದು ಬದಿಯಲ್ಲಿ ರೈಲು ಸಂಚಾರಕ್ಕೆ ಅನುಕೂಲತೆ ಒದಗಿಸಿಕೊಡಲಾಯಿತು.
