ಬೆಂಗಳೂರು: ‘ಯಕ್ಷಗಾನ ಎಂಬುದು ಕೇವಲ ಕಲೆಯಲ್ಲ, ಅದೊಂದು ವಿಸ್ಮಯದ ಜಗತ್ತು. ಅಲ್ಲಿ ಎಲ್ಲವೂ ಇದೆ. ಗಾಯನ, ನೃತ್ಯ, ಕಥನ, ಜೀವನ ಎಲ್ಲವೂ ಒಳಗೊಂಡ ವಿಶಿಷ್ಟವಾದ ಮಾಧ್ಯಮವದು. ಯಕ್ಷಗಾನವೇ ಉಸಿರಾಗಿರುವ ಕರಾವಳಿಯ ನೆಲದ ಸಂಸ್ಕೃತಿಯ ಹುಟ್ಟಿ ಬೆಳೆದಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ತುಂಬ ಅಭಿಮಾನವೆನಿಸುತ್ತದೆ’ ಎಂದು ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಹೇಳಿದರು.
ಹವ್ಯಾಸಿ ಯಕ್ಷಬಳಗ, ಪುತ್ತೂರು ಸಂಸ್ಥೆಯು ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗ ಮತ್ತು ಥಿಯೇಟರ್ ಯಕ್ಷ [ರಿ.] ಉಡುಪಿ ಇದರ ಸಹಕಾರದೊಂದಿಗೆ ಇತ್ತೀಚೆಗೆ [ಫೆಬ್ರವರಿ 13, 2024) ರಂದು ಬೆಂಗಳೂರಿನ ಕನ್ನಡಭವನದಲ್ಲಿ ಆಯೋಜಿಸಲಾದ ವಚನಗಳ ಯಕ್ಷಗಾಯನ ಮತ್ತು ಪ್ರಯೋಗಾತ್ಮಕ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಾಲ್ಯದಲ್ಲಿ ಯಕ್ಷಗಾನ ಬಯಲಾಟಗಳನ್ನು ವೀಕ್ಷಿಸುತ್ತ ಬೆಳೆದ ದಿನಗಳನ್ನು ನೆನಪಿಸಿಕೊಂಡ ಡಾ. ಧರಣೀದೇವಿ, ‘ಯಕ್ಷಗಾನ ಎಲ್ಲವನ್ನೂ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಳ್ಳುತ್ತ ಸಮಾಜಮುಖಿ ಕಲೆಯಾಗಿ ಬೆಳೆದುಬಂದಿದೆ. ಯಕ್ಷಗಾನವನ್ನು ಜನರ ಕಲೆಯಾಗಿ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.
ಆರಂಭದಲ್ಲಿ ಥಿಯೇಟರ್ ಯಕ್ಷ [ರಿ.] ಸಂಸ್ಥೆಯ ಸಂಚಾಲಕ ಸುನಿಲ್ ಪಲ್ಲಮಜಲು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗವತ ವಿಶ್ವಾಸ್ ಕರ್ಬೆಟ್ಟು ಅವರು ಬಸವಣ್ಣ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಯಕ್ಷಗಾನ ಶೈಲಿಗೆ ಸಂಯೋಜಿಸಿ ಪ್ರಸ್ತುತಪಡಿಸಿದರು. ಮದ್ದೆಗಾರ ಸ್ಕಂದ ಕೊನ್ನಾರ್, ಸಮರ್ಥ ಉಡುಪ ಕತ್ತಲ್ಸಾರ್ ಮತ್ತು ಪಿಟೀಲು ವಿದ್ವಾನ್ ಪ್ರಣೀತ್ ಬಳ್ಳಕ್ಕರಾಯ ಹಿಮ್ಮೇಳದಲ್ಲಿ ಸಹಕರಿಸಿದರು. ಸಂಯೋಜಕ. ಹಿರಿಯ ವೇಷಧಾರಿ ಶಶಿಕಿರಣ್ ಕಾವು ಅವರು ಮುಖ್ಯ ಅತಿಥಿಗಳನ್ನು ಗೌರವಿಸಿದರು. ನಾಗೇಶ್ ಬೈಲೂರು ಧನ್ಯವಾದ ಸಮರ್ಪಿಸಿದರು. ಬಳಿಕ, ಪೃಥ್ವಿರಾಜ ಕವತ್ತಾರು ಅವರ ನಿರ್ದೇಶನದಲ್ಲಿ ಥಿಯೇಟರ್ ಯಕ್ಷ [ರಿ.] ತಂಡದವರು ‘ಶ್ರೀಮನೋಹರ ಸ್ವಾಮಿ ಪರಾಕು’ ಯಕ್ಷಗಾನವನ್ನು ಪ್ರಸ್ತುತಪಡಿಸಿದರು.