ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಸೆ. 9ರಂದು ನಡೆಯಲಿದೆ. ಆಡಳಿತಾರೂಢ ಎನ್ಡಿಎ ಮತ್ತು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದ್ದರಿಂದ ಈ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.
ಆದರೆ ಬಿಜೆಡಿ, ಬಿಆರ್ಎಸ್ ಸೇರಿದಂತೆ 17 ಸಂಸದರು ತಾವು ಯಾರಿಗೆ ಮತ ಚಲಾಯಿಸುತ್ತೇವೆ ಎಂಬುದರ ಕುರಿತ ನಿರ್ಧಾರವನ್ನು ಪ್ರಕಟಿಸದ ಕಾರಣ ಚುನಾವಣೆ ತುಸು ಕಾವೇರುವ ಸಾಧ್ಯತೆ ಇದೆ.
ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ.ರಾಧಾಕೃಷ್ಣನ್ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ, ತೆಲಂಗಾಣ ಮೂಲದ ಬಿ.ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ. ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ನಿರ್ಧರಿಸದ 17 ಸಂಸದರನ್ನು ಹೊರತುಪಡಿಸಿ, ಉಳಿದ ಎಲ್ಲ ಸಂಸದರು ತಮ್ಮ ಪಕ್ಷಗಳ ಆಧಾರದ ಮೇಲೆ ಮತ ಚಲಾಯಿಸಿದರೆ ರಾಧಾಕೃಷ್ಣನ್ ಅವರು ರೆಡ್ಡಿ ಅವರ ವಿರುದ್ಧ 439–324 ಮತಗಳೊಂದಿಗೆ ಮುನ್ನಡೆ ಪಡೆದುಕೊಳ್ಳಲಿದ್ದಾರೆ.
ಪ್ರಸ್ತುತ ಮತದಾರರ ಸಂಖ್ಯೆ 781 (ರಾಜ್ಯಸಭೆ, ಲೋಕಸಭೆಯ ಸದಸ್ಯರು) ಆಗಿದೆ. ಮತದಾರರ ಪಟ್ಟಿ ಸಿದ್ಧವಾದ ಬಳಿಕ ಶಿಬು ಸೊರೇನ್ ಅವರು ನಿಧನರಾದರು. ಅವರ ಸ್ಥಾನವೂ ಸೇರಿದಂತೆ ಒಟ್ಟು ಏಳು ಸ್ಥಾನಗಳು ಖಾಲಿ ಇವೆ. ಬಿಜೆಡಿ ಏಳು, ಬಿಆರ್ಎಸ್ನ ನಾಲ್ವರು, ಅಕಾಲಿದಳ, ಜಡ್ಪಿಎಮ್ ಮತ್ತು ವಿಒಟಿಟಿಪಿಯ ತಲಾ ಒಬ್ಬರು ಹಾಗೂ ಮೂವರು ಸ್ವತಂತ್ರ ಸದಸ್ಯರು ತಮ್ಮ ಆದ್ಯತೆ ಯಾರಿಗೆ ಎಂಬುದರ ಸ್ಪಷ್ಟ ಸೂಚನೆ ಇಲ್ಲಿಯವರೆಗೂ ನೀಡಿಲ್ಲ.
‘ಯಾರಿಗೆ ಮತ ಚಲಾಯಿಸಬೇಕು ಎಂಬುದರ ಬಗ್ಗೆ ಪಕ್ಷದ ನಾಯಕತ್ವ ಸೂಕ್ತ ಸಮಯದಲ್ಲಿ ನಿರ್ಧರಿಸಲಿದೆ’ ಎಂದು ಬಿಜೆಡಿಯ ಸಸ್ಮಿತ್ ಪಾತ್ರ, ಬಿಆರ್ಎಸ್ನ ಕೆ. ಸುರೇಶ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
‘ಇಂಡಿಯಾ’ ಕೂಟ ತೊರೆದಿರುವ ಎಎಪಿ ತನ್ನ 10 ಸಂಸದರ ಬೆಂಬಲವನ್ನು ರೆಡ್ಡಿ ಅವರಿಗೆ ಸೂಚಿಸಿದ್ದರೆ, ಯಾವುದೇ ಬಣದ ಜತೆ ಗುರುತಿಸಿಕೊಳ್ಳದ ವೈಎಸ್ಆರ್ ಕಾಂಗ್ರೆಸ್ ತನ್ನ 11 ಸದಸ್ಯರ ಬೆಂಬಲವನ್ನು ರಾಧಾಕೃಷ್ಣನ್ ಅವರಿಗೆ ನೀಡುವುದಾಗಿ ತಿಳಿಸಿದೆ.
ಗೋಪ್ಯ ಮತದಾನ. ಆದ್ದರಿಂದ ಅಡ್ಡ ಮತದಾನದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದರ ನಿರೀಕ್ಷೆಯಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಯ ಮತಗಳಿಕೆಯಲ್ಲಿ ಆಗಬಹುದಾದ ಏರಿಳಿಕೆ ಕುರಿತು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಸಂಜೆ 6ಕ್ಕೆ ಮತ ಎಣಿಕೆ
ಮತದಾನ ಸೆ. 9ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ನಡೆಯಲಿದೆ. ಸಂಜೆ 6 ಗಂಟೆಗೆ ಮತ ಎಣಿಕೆ ನಡೆಯಲಿದ್ದು ಬಳಿಕ ಫಲಿತಾಂಶ ಪ್ರಕಟವಾಗಲಿದೆ.
ಕಾಡುತ್ತಿರುವ ಅಮಾನ್ಯ ಮತಗಳು:
ಪ್ರಾಶಸ್ತ್ಯ ಮತದಾನ ಪದ್ಧತಿಯಡಿ ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು ಈ ಹಿಂದೆ ಅಮಾನ್ಯಗೊಂಡದ್ದಿದೆ. ಹೀಗಾಗಿಯೇ ಸಂಸದರಿಗೆ ಈ ಮತದಾನ ಪದ್ಧತಿಯ ಬಗ್ಗೆ ಸೂಕ್ತ ತರಬೇತಿ ನೀಡಲು ಆಡಳಿತ ಮತ್ತು ವಿರೋಧ ಪಕ್ಷಗಳ ಮುಖಂಡರು ಕಾಳಜಿವಹಿಸಿದ್ದಾರೆ. ಈ ಪದ್ಧತಿಯಡಿ ಹೇಗೆ ಮತ ಚಲಾಯಿಸಬೇಕು ಎಂಬುದರ ಕುರಿತು ಬಿಜೆಪಿ ಈಗಾಗಲೇ ತನ್ನ ಸಂಸದರಿಗೆ ತರಬೇತಿ ನೀಡಲು ಆರಂಭಿಸಿದೆ. ವಿರೋಧ ಪಕ್ಷವು ಸಂವಿಧಾನ ಸದನದ ಸೆಂಟ್ರಲ್ ಹಾಲ್ನಲ್ಲಿ ಸೋಮವಾರ ಅಣಕು ಮತದಾನ ಏರ್ಪಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಅನೆಕ್ಸ್ನಲ್ಲಿ ರಾತ್ರಿ ಭೋಜನ ಕೂಟ ಆಯೋಜಿಸಿದ್ದಾರೆ. 2017 ಮತ್ತು 2022ರ ಚುನಾವಣೆಯಲ್ಲಿ ಕ್ರಮವಾಗಿ 11 ಮತ್ತು 15 ಮತಗಳು ಅಮಾನ್ಯವಾಗಿದ್ದವು. 1997ರಲ್ಲಿ ಅತ್ಯಧಿಕ ಅಂದರೆ 46 ಮತಗಳು ಅಮಾನ್ಯಗೊಂಡಿದ್ದವು.
ತೀವ್ರ ಸ್ಪರ್ಧೆ
ವಿರೋಧ ಪಕ್ಷಗಳ ಎಲ್ಲ 324 ಮತಗಳು ಚಲಾವಣೆಯಾಗಿ ಅದರ ಅಭ್ಯರ್ಥಿ ಸೋತರೂ ಅದು ಇಲ್ಲಿಯವರೆಗೆ ಸೋತ ಅಭ್ಯರ್ಥಿ ಪಡೆದ ಅತ್ಯಧಿಕ ಮತಗಳಾಗಿರುತ್ತವೆ. 2002ರಲ್ಲಿ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರು 305 ಮತಗಳನ್ನು ಪಡೆದು ಸೋತಿದ್ದರು. ಆ ಚುನಾವಣೆಯಲ್ಲಿ ಭೈರೋನ್ ಸಿಂಗ್ ಶೆಖಾವತ್ ಅವರು 454 ಮತಗಳನ್ನು ಪಡೆದು ಗೆದ್ದಿದ್ದರು. ಇದು ಉಪರಾಷ್ಟ್ರಪತಿ ಸ್ಥಾನಕ್ಕೆ ಇಲ್ಲಿಯವರೆಗೂ ನಡೆದಿರುವ ಅತ್ಯಂತ ಬಿಗಿಯಾದ ಚುನಾವಣೆ ಎಂದೇ ಗುರುತಿಸಲಾಗಿದೆ. 2022ರ ಚುನಾವಣೆಯಲ್ಲಿ ಟಿಎಂಸಿ ಸಂಸದರು ಮತಚಲಾಯಿಸದಿದ್ದರೂ ಜಗದೀಪ್ ಧನಕರ್ ಅವರು 528 ಮತಗಳನ್ನು ಪಡೆದು ಗೆದ್ದಿದ್ದರು. ಅವರ ಹಿಂದಿನ ಚುನಾವಣೆಯಲ್ಲಿ ಎಂ. ವೆಂಕಯ್ಯ ನಾಯ್ಡು ಅವರು 516 ಮತಗಳನ್ನುಗಳಿಸಿ ಉಪರಾಷ್ಟ್ರಪತಿಯಾಗಿದ್ದರು. ಆದರೆ ಈ ಬಾರಿ ಎನ್ಡಿಎ ಅಭ್ಯರ್ಥಿ 500 ಮತಗಳನ್ನು ದಾಟುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.