ಬೆಂಗಳೂರು: ವೀರಶೈವ ಧರ್ಮದ ಪ್ರಾಚೀನತೆಯ ಬಗ್ಗೆ ನೂರಾರು ಶಾಸನಗಳಲ್ಲಿ ಹಾಗೂ ಹಲವಾರು ಶರಣರ ವಚನಗಳಲ್ಲಿ ಉಲ್ಲೇಖಗೊಂಡಿದೆ. ಈ ಬಗ್ಗೆ ಸಮಾಜದಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿರುವುದನ್ನು ವೀರಶೈವ ಪೀಠಾಧಿಪತಿಗಳು ಖಂಡಿಸಿದ್ದಾರೆ.
ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವೀರಶೈವ ಲಿಂಗಾಯತ ಪ್ರತ್ಯೇಕಗೊಳಿಸುವ ಪೂರ್ವಗ್ರಹ ಪೀಡಿತ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ರಿಸ್ತಪೂರ್ವದಿಂದ 19ನೇ ಶತಮಾನದವರೆಗಿನ ನೂರಾರು ಶಾಸನಗಳಲ್ಲಿ ವೀರಶೈವದ ಪ್ರಸ್ತಾಪವಿದೆ. ಸಂಸ್ಕೃತ, ಕನ್ನಡ, ತಮಿಳು, ತೆಲುಗು ಭಾಷೆಯ ಸಾಹಿತ್ಯ ಮತ್ತು ಶಾಸನಗಳು ವೀರಶೈವ ಪ್ರಾಚೀನತೆಯನ್ನು ಸಾಬೀತುಪಡಿಸಿವೆ. ಎಂ.ಎಂ. ಕಲಬುರ್ಗಿ ಪ್ರಧಾನ ಸಂಪಾದಕತ್ವದ ಕರ್ನಾಟಕ ಸರ್ಕಾರ ಪ್ರಕಟಿತ ವಚನ ಸಂಪುಟಗಳಲ್ಲಿ ಬಸವಣ್ಣನವರೂ ಸೇರಿ 30 ಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದಪ್ರಯೋಗ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬಸವಣ್ಣನವರೇ ತಮ್ಮ ವಚನದಲ್ಲಿ ತಾವು ನಿಜ ವೀರಶೈವ ಎಂದು ಹೇಳಿಕೊಂಡಿದ್ದಾರೆ. ಈಗ ಕೇವಲ ಮೀಸಲಾತಿಗಾಗಿ ವೀರಶೈವ ಧರ್ಮದ ಸನಾತನ ಘನತೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಪೀಠದ ಶ್ರೀಗಳು ಸಲಹೆ ನೀಡಿದ್ದಾರೆ.