ಮಹಾಕುಂಭ ನಗರ: ತ್ರಿವೇಣಿ ಸಂಗಮದಲ್ಲಿ ವಸಂತ
ಪಂಚಮಿ ದಿನವಾದ ಸೋಮವಾರ ಮೂರು ಕೋಟಿಗೂ ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಸ್ನಾನ ಮಾಡಲಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನದ ಸಂದರ್ಭಸಂಭವಿಸಿದ ಕಾಲ್ತುಳಿತ ದುರಂತದ ನಂತರ ಉತ್ತರ ಪ್ರದೇಶ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಕುಂಭಮೇಳದ ಮೂರನೇ ಪವಿತ್ರ ಸ್ನಾನದ ದಿನವಾದ ವಸಂತ ಪಂಚಮಿಯಂದು ಪವಿತ್ರ ಸ್ನಾನ ಮಾಡಲು ಅಸಂಖ್ಯಾತ ಭಕ್ತರು ಮಹಾಕುಂಭ ನಗರದಲ್ಲಿ ಭಾನುವಾರವೇ ಜಮಾಯಿಸಿದ್ದರು.
ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು 2019ರ ಅರ್ಧ ಕುಂಭಮೇಳವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅಧಿಕಾರಿಗಳ ತಂಡದ ಭಾಗವಾಗಿದ್ದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಾದ ಆಶಿಶ್ ಗೋಯಲ್ ಮತ್ತು ಭಾನುಚಂದ್ರ ಗೋಸ್ವಾಮಿ ಅವರನ್ನು ನಿಯೋಜಿಸಲಾಗಿದೆ.
ಮಹಾಕುಂಭ ನಗರಕ್ಕೆ ಭಾನುವಾರ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾನು ಭಾಸ್ಕರ್ ಅವರು ಜನದಟ್ಟಣೆ ನಿಯಂತ್ರಣದ ಕ್ರಮಗಳ ಮೇಲ್ವಿಚಾರಣೆ ನಡೆಸಿದರು. ಜನದಟ್ಟಣೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸರಿಗೆ ಆದೇಶಿಸಿದರು.
ಸಂಗಮದಲ್ಲಿ 28 ಆಯಕಟ್ಟಿನ ಸ್ಥಳಗಳನ್ನು ಗುರುತಿಸಲಾಗಿದ್ದು, ಕ್ಷಿಪ್ರ ಕಾರ್ಯಪಡೆ ಹಾಗೂ ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿದೆ. ವಿವಿಐಪಿ ಪಾಸ್ಗಳನ್ನು ರದ್ದುಗೊಳಿಸಲಾಗಿದ್ದು, ವಾಹನ ರಹಿತ ವಲಯವನ್ನಾಗಿ ಘೋಷಿಸಲಾಗಿದೆ.
ಮೌನಿ ಅಮಾವಾಸ್ಯೆಯ ಕಾಲ್ತುಳಿತ ದುರಂತದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಮಹಾಕುಂಭ ನಗರಕ್ಕೆ ಭೇಟಿ ನೀಡಿ ಸಂತರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದರು. ಭಕ್ತರ ಪವಿತ್ರ ಸ್ನಾನ ಸುಗಮವಾಗಿ ನಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ 90 ಲಕ್ಷ ಭಕ್ತರು ಗಂಗಾ ಮತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಜ. 13ರಿಂದ ಇದುವರೆಗೂ 33.61 ಕೋಟಿ ಭಕ್ತರು ಮಿಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಗ್ರಾಜ್ನ ಫಫಾಮುವಿನಿಂದ ಅರೈಲ್ವರೆಗೆ ಎಲ್ಲಿ ಬೇಕಾದರೂ ಭಕ್ತರು ಪವಿತ್ರ ಸ್ನಾನ ಮಾಡಬಹುದು ಎಂದು ಅಖಿಲ ಭಾರತ ಅಖಾಡ ಪರಿಷತ್ನ ಅಧ್ಯಕ್ಷ ಮಹಂತ ರವೀಂದ್ರ ಪುರಿ ಹೇಳಿದ್ದಾರೆ.