ಲಖನೌ: ಮೌನಿ ಅಮವಾಸ್ಯೆಯಂದು ‘ಅಮೃತ ಸ್ನಾನ’ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 30 ಮಂದಿ ಮೃತಪಟ್ಟ ಕಾರಣ ಮುಂದಿನ ‘ಅಮೃತ ಸ್ನಾನ’ಗಳಲ್ಲಿ ಇಂಥ ಯಾವುದೇ ಅವಘಡಗಳು ನಡೆಯದಿರಲಿ ಎಂದು ಮೇಳದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಫೆ.3ರ ವಸಂತ ಪಂಚಮಿ ದಿನ ಮೂರನೇ ‘ಅಮೃತ ಸ್ನಾನ’ ನೆರವೇರಲಿದ್ದು ಸಂಗಮದಲ್ಲಿ ಮಾತ್ರವಲ್ಲದೆ ಇತರೆ ಘಾಟ್ಗಳಲ್ಲಿಯೂ ಪುಣ್ಯ ಸ್ನಾನ ಮಾಡುವಂತೆ ಭಕ್ತರನ್ನು ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದಾರೆ. ವಸಂತ ಪಂಚಮಿ ಅಮೃತ ಸ್ನಾನವು ಭಾನುವಾರ ರಾತ್ರಿಯಿಂದಲೇ ಆರಂಭವಾಗಲಿದ್ದು ಮೂರು ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜನರ ನಿರ್ವಹಣೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೊಸ ರೀತಿಯ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಲ್ಲಾ ವಿವಿಐಪಿ ಪಾಸ್ಗಳನ್ನು ರದ್ದು ಮಾಡಲಾಗಿದೆ. ಮೇಳದ ಪ್ರದೇಶವನ್ನು ‘ವಾಹನರಹಿತ ವಲಯ’ ಎಂದು ಘೋಷಿಸಲಾಗಿದೆ. ಸಂಗಮಕ್ಕೆ ತೆರಳಲು ಮತ್ತು ಪುಣ್ಯ ಸ್ನಾನದ ಬಳಿಕ ಹಿಂದಿರುಗಲು ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.