ಬೆಳಗಾವಿ : ಬೆಂಗಳೂರು-ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ” ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸಲಾಗಿದ್ದು, ಅದರಂತೆ ನೂತನ ವೇಳಾ ಪಟ್ಟಿಯಂತೆ ಶೀಘ್ರದಲ್ಲಿ ತನ್ನ ನೂತನ ಸಂಚಾರವನ್ನು ಬೆಳಗಾವಿಯಿಂದ ಆರಂಭಿಸಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಈ ಕುರಿತು ದಿನಾಂಕ: 10-02-2025 ರಂದು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರ, ಇವರ ಉಪಸ್ಥಿಯಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಕೊಳ್ಳಲಾಗಿದೆ.
ಪ್ರಸ್ತಾಪಿತ ರೈಲಿನ ಸೇವೆಯನ್ನು ಬೆಳಗಾವಿಯ ವರೆಗೆ ವಿಸ್ತರಿಸುವ ಕುರಿತು ಅನೇಕ ತಿಂಗಳುಗಳಿಂದ ಜಗದೀಶ ಶೆಟ್ಟರ ಅವರು ಪ್ರಯತ್ನಿಸುತ್ತಿದ್ದು, ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಯವರನ್ನು ಸಹ ಭೇಟಿ ಮಾಡಿ ವಿನಂತಿಸಿದ್ದು ಹಾಗೂ ಈ ನಿಟ್ಟಿನಲ್ಲಿ ಅನೇಕ ಬಾರಿ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವಿ, ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ್ದು ಮತ್ತು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಅವರೊಡನೆ ಸಹ ನೈರುತ್ಯ ವಲಯದ ರೇಲ್ವೆ ಮಹಾ ಪ್ರಬಂಧಕ ಸಂಜೀವ ಶ್ರೀವಾತ್ಸವ ಅವರೊಡನೆ ಸಭೆಯನ್ನು ನಡೆಸಿದ್ದು, ಅದಕ್ಕನುಗುಣವಾಗಿ ಸೂಕ್ತ ಫಲ ಇಂದು ದೊರಕಿದಂತಾಗಿದೆ ಹಾಗೂ ಬೆಳಗಾವಿ ನಿವಾಸಿಗಳ ಅನೇಕ ದಿನಗಳ ಬೇಡಿಕೆ ಈಡೇರಿದೆ ಎಂದು ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.
ಈ ಬಗ್ಗೆ ಎಲ್ಲ ಅಗತ್ಯ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಮತ್ತು ಕೇಂದ್ರ ರಾಜ್ಯ ರೇಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಇದೇ ಸಂದರ್ಭದಲ್ಲಿ ಜಗದೀಶ ಶೆಟ್ಟರ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈರಣ್ಣ ಕಡಾಡಿ ಮನವಿ :
ಬೆಳಗಾವಿ-ಮಿರಜ್ ವಿಶೇಷ ರೈಲನ್ನು ಪ್ಯಾಸೆಂಜರ್ ರೈಲು ಎಂದು ಪರಿಗಣಿಸಿ ನಿರಂತರ ಸಂಚಾರಕ್ಕೆ ಅನುಮತಿ ನೀಡುವುದು ಸೇರಿದಂತೆ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂವನ್ನು ಆದಷ್ಟು ಬೇಗ ಘೋಷಿಸಲು ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ಮಂಗಳವಾರ ಲೋಕಸಭೆಯ ಸಚಿವರ ಕಾರ್ಯಾಲಯದಲ್ಲಿ ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಮಂಗಳವಾರ ಫೆ-11 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ಮತ್ತು ಮೀರಜ್ ನಡುವಿನ ಈಗಿರುವ ವಿಶೇಷ ರೈಲಿನ ದರ ಅತ್ಯಂತ ದುಬಾರಿಯಾಗಿದ್ದು ಇದು ಜನ ಸಾಮಾನ್ಯರು ಒಡಾಡುವ ರೈಲು ಆಗಿರುವ ಕಾರಣ ಇದನ್ನು ಅತಿಶೀಘ್ರವಾಗಿ ಪ್ಯಾಸೆಂಜರ್ ರೈಲಾಗಿ ಪರಿವರ್ತಿಸಿ ನಿರಂತರ ಒಡಾಟಕ್ಕೆ ಅವಕಾಶ ನೀಡುವ ಮತ್ತು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವುದು ಅತ್ಯಂತ ಅವಶ್ಯವಾಗಿದೆ.
ಜೊತೆಗೆ ಈ ಹಿಂದೆ ಧಾರವಾಡದಿಂದ ಬೆಳಗಾವಿಯವರೆಗೆ ವಂದೇ ಭಾರತ ರೈಲನ್ನು ವಿಸ್ತರಿಸುವ ಹಿನ್ನಲೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದು ಕೆಲವು ತಾಂತ್ರಿಕ ತೊಂದರೆಗಳ ಕಾರಣದಿಂದ ಆ ರೈಲು ಒಡಾಟಕ್ಕೆ ಇನ್ನೂ ಹಸಿರು ನಿಶಾನೆ ತೊರಿಸಲಾಗಿಲ್ಲ. ಈಗ ಆ ಎಲ್ಲ ತಾಂತ್ರಿಕ ತೊಂದರೆಗಳ ನಿವಾರಣೆಯಾಗಿದ್ದು, ಆದಷ್ಟು ಬೇಗ ರೈಲಿನ ವೇಳಾಪಟ್ಟಿ ಮತ್ತು ದಿನಾಂಕ ಘೋಷಿಸಬೇಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಂಸದ ಈರಣ್ಣ ಕಡಾಡಿ ಆಗ್ರಹಿಸಿದರು.
ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವರು ನೂತನ ಮೆಮು ರೈಲುಗಳ ನಿರೀಕ್ಷೆಯಲ್ಲಿದ್ದು ಇಲಾಖೆಯ ಸುಪರ್ದಿಗೆ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದರು. ಈ ಹಿಂದೆ ನಾನು ಮೆಮು ರೈಲು ಸಂಚಾರ ಕುರಿತು ಭರವಸೆ ನೀಡಿದ್ದೇನೆ. ನಿಮ್ಮ ಒತ್ತಾಯದ ಹಿನ್ನಲೆಯಲ್ಲಿ ಆದಷ್ಟು ಬೇಗ ಮೆಮು ರೈಲು ಒದಗಿಸಲಿಕ್ಕೆ ವಿಶೇಷ ಶ್ರಮ ಹಾಕಿ ಆ ಭಾಗದ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆಯನ್ನು ನೀಡಿದ್ದಾರೆ ಮತ್ತು ಈ ಹಿಂದೆ ಪ್ರಾಯೋಗಿಕ ಪರೀಕ್ಷೆ ನಡೆಸಿದ ವಂದೇ ಭಾರತ ರೈಲಿನ ಎಲ್ಲ ತಾಂತ್ರಿಕ ತೊಂದರೆಗಳನ್ನು ಹಂತ ಹಂತವಾಗಿ ನಿವಾರಿಸಲಾಗಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ದಿನಾಂಕ ಮತ್ತು ವೇಳಾಪಟ್ಟಿಯನ್ನು ಘೋಷಿಸಲಾಗುವುದು ಎಂದು ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.