ಮೂಡಲಗಿ(ಕೌಜಲಗಿ): ಶ್ರೀ ಕೃಷ್ಣ ಪಾರಿಜಾತದ ಅದ್ಬುತ ಕಲಾವಿದೆ ಕೌಜಲಗಿ ನಿಂಗಮ್ಮನನ್ನು ನಾಡಿಗೆ ನೀಡಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ. ಇಂತಹ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನವು ಈ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಉಪಯೋಗವಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಶುಭ ಹಾರೈಸಿದರು.
ಕೌಜಲಗಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೌಜಲಗಿ ಗ್ರಾಮದ ಬಸವಣ್ಣ ದೇವರ ದೇವಸ್ಥಾನದ ಪಕ್ಕದ ಜಾಗದಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗುವುದರಿಂದ ಮುಂಬರುವ ದಿನಗಳಲ್ಲಿ ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬದ ಜನರ ಅಗತ್ಯಗಳಿಗೆ ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ. ಗ್ರಾಮದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈಗಾಗಲೇ ಕೌಜಲಗಿ ಗ್ರಾಮಕ್ಕೆ ಸಂಸದರ ನಿಧಿಯಿಂದ ಎಲ್ಲಾ ಸಮುದಾಯಗಳ ಜನರಿಗೆ ಸಾಕಷ್ಟು ಅನುದಾನವನ್ನು ನೀಡುವ ಮೂಲಕ ಕೌಜಲಗಿ ಗ್ರಾಮದ ಅಭಿವೃದ್ದಿಯಲ್ಲಿ ನನ್ನದು ಅಳಿಲು ಸೇವೆ ಇದೆ. ಮುಂಬರುವ ದಿನಗಳಲ್ಲಿ ಕೂಡಾ ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮಹಾಂತಪ್ಪ ಶಿವನಮೂರಿ, ಈರಪ್ಪಣ್ಣ ಬಿಸಗುಪ್ಪಿ, ಪಾವಡಯ್ಯಾ ಪಾಟೀಲ, ಸಿದ್ದಪ್ಪ ಬಿಸಗುಪ್ಪಿ, ಬಸವರಾಜ ಲೋಕನ್ನವರ, ಶಿವಾನಂದ ಲೋಕನ್ನವರ, ಅಶೋಕ ಪಾಟೀಲ, ಮಹಾಂತೇಶ ಕೌಜಲಗಿ, ಶೇಕಪ್ಪ ಮೂಡಲಗಿ, ಬಸಪ್ಪ ಪಟಗುಂದಿ, ಸಿದ್ದಪ್ಪ ಹಳ್ಳೂರ, ಬೀರಪ್ಪ ಖಿಲಾರಿ, ಪರಸಪ್ಪ ಪೂಜೇರಿ, ಬಸಪ್ಪ ಸಣ್ಣಕ್ಕಿ, ಸುಧಾಕರ ಪರುಶೆಟ್ಟಿ, ಈರಪ್ಪ ಬಿಸನಕೊಪ್ಪ, ಸಿದ್ದಪ್ಪ ದಾನನನ್ವರ, ಈರಪ್ಪ ಬಿಸಗುಪ್ಪಿ, ರಮೇಶ ಬೇವಿನಕಟ್ಟಿ, ಶ್ರೀಕಾಂತ ಸ್ವಾಮಿಗಳು, ಕೆಂಪಯ್ಯ ಸ್ವಾಮಿಗಳು ಸೇರಿದಂತೆ ಸ್ಥಳೀಯ ಮುಖಂಡರು, ಯುವಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.