ಬೆಳಗಾವಿ: ಅಥಣಿಯ ಬಣಜವಾಡ ಕಾಲೇಜು ಬಳಿಯ ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಬಲಿಯಾಗಿದ್ದಾರೆ. ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.
ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕು ಗಣೇಶವಾಡಿ ಗ್ರಾಮದ ಮಹೇಶ್ ಸುಭಾಷ್ ಗಾತಾಡೆ (30), ಶಿರೋಳ ತಾಲೂಕು ಪುಡವಾಡ ಗ್ರಾಮದ ಶಿವಂ ಯುವರಾಜ್ ಚವಾಣ್ (24) ಮತ್ತು ಸಾಂಗ್ಲಿ ಜಿಲ್ಲೆ ಮಿರಜ್ ತಾಲೂಕಿನ ಕವಲಾಪುರ ಗ್ರಾಮದ ಸಚಿನ್ ವಿಲಾಸ್ ಮಾಳಿ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೊದಲಿಗೆ ಕಾಗವಾಡ ಕಡೆಯಿಂದ ಕೆಂಪು ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಮತ್ತು ಅಥಣಿಯಿಂದ ಕಾಗವಾಡಕ್ಕೆ ತೆರಳುತ್ತಿದ್ದ ಪಿಕಪ್ ವಾಹನದ ನಡುವೆ ಅಪಘಾತವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್ ಸಹಾಯಕ್ಕೆ ಬೇಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ಕಾರ್ಪಿಯೋ ಚಾಲಕ ತನ್ನ ವಾಹನವನ್ನು ಬದಿಗೆ ಸರಿಸಿ ಅವರನ್ನು ರಕ್ಷಿಸಲು ಮುಂದಾದಾಗ ಅಥಣಿ ಕಡೆಯಿಂದ ಬಂದ ಇನೋವಾ ಕಾರು ನೇರವಾಗಿ ರಕ್ಷಿಸಲು ಮುಂದಾದ ವ್ಯಕ್ತಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅಥಣಿಯ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ, ಪಿಕಪ್ ವಾಹನ, ಇನೋವಾ ಮತ್ತು ಸ್ಕಾರ್ಪಿಯೋ ನಡುವೆ ಈ ಅಪಘಾತ ಸಂಭವಿಸಿದೆ.