ಬೆಳಗಾವಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಗ ಚಾಲಕ ಮೋಹನ ಭಾಗವತ ಅವರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಆದರೆ ಅವರು ತಂಗಲಿರುವ ಮನೆಗೆ ತೆರಳುವ ರಸ್ತೆ ಯಾವುದೇ ದುರಸ್ತಿ ಕಾಣದೆ ಅದೇ ರಾಗ ಅದೇ ಹಾಡು ಎನ್ನುವಂತಿದೆ.
ಬೆಳಗಾವಿಯ ಪತ್ರಕರ್ತರ ಕಾಲೋನಿಗೆ ಜಗತ್ತಿನ ಅತ್ಯಂತ ಶಿಸ್ತಿನ ಸೇನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾರಥಿ ಆಗಮಿಸುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲಾಡಳಿತ ಅವರು ಆಗಮಿಸುವ ರಸ್ತೆಯ ಸುಧಾರಣೆಗೆ ಮುಂದಾಗದೇ ಇರುವುದಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ರಸ್ತೆ ಸಂಪೂರ್ಣ ಕೆಟ್ಟು ಹೋಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಇದನ್ನು ದುರಸ್ತಿ ಮಾಡುವ ಬಗ್ಗೆ ಯಾವುದೇ ಕಾಳಜಿ ತೋರದೆ ಇರುವುದು ಆಡಳಿತದ ಬಹುದೊಡ್ಡ ವೈಫಲ್ಯವಾಗಿದೆ.
ರಾಜ್ಯದ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಇದೇ ಪರಿಸರದಲ್ಲಿದೆ. ಜೊತೆಗೆ ಅತ್ಯಂತ ಪ್ರತಿಷ್ಠಿತ ನಾಗರಿಕರು ಸಹ ಇದೇ ಪರಿಸರದಲ್ಲಿ ವಾಸಿಸುತ್ತಿದ್ದರು ಸಂಬಂಧಿಸಿದ ಆಡಳಿತ ಇಂತಹ ಪ್ರತಿಷ್ಠಿತ ರಸ್ತೆಯನ್ನು ದುರಸ್ತಿ ಮಾಡದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.


