ಬೆಳಗಾವಿ : ಕೆ.ಎಲ್.ಇ. ಸೊಸೈಟಿಯ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನ ವತಿಯಿಂದ ಉತ್ತಮ ಕಾನೂನು ಶಿಕ್ಷಣವನ್ನು ನೀಡುತ್ತಿರುವ 50 ವರ್ಷಗಳ ಗಣನೀಯ ಸೇವೆಯನ್ನು ಪೂರೈಸಿದ ಅಂಗವಾಗಿ, ಮೇ 10, 2025 ರಂದು “ಭಾರತದ ಸಂವಿಧಾನ @75: ಸಂವಿಧಾನಾತ್ಮಕತೆಯನ್ನು ಪುನರ್ ಆವಿಷ್ಕರಿಸುವುದು” ಎಂಬ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಬೆಳಗಾವಿಯ ಜೆ.ಎನ್.ಎಂ.ಸಿ.ಯ ಡಾ.ಕೊಡ್ಕಣಿ ಸಭಾಂಗಣದಲ್ಲಿ ಮೇ 10 ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ. ದೇಶದಾದ್ಯಾಂತ 20 ಕ್ಕೂ ಹೆಚ್ಚು ಕಾಲೇಜುಗಳು ಹಾಗೂ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
75 ವರ್ಷಗಳ ಸಂವಿಧಾನಾತ್ಮಕ ಆಡಳಿತದ ನಂತರ ಭಾರತೀಯ ಪ್ರಜಾಪ್ರಭುತ್ವವು ತಿರುವುಮೋಡಿನಲ್ಲಿ ನಿಂತಿದೆ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಯಶಸ್ಸು ಅದರ ಮೂಲ ತತ್ವಗಳಾದ ಸಂವಿಧಾನಾತ್ಮಕತೆ, ನ್ಯಾಯ, ಕಾನೂನು ಆಧಿಪತ್ಯದ ಅನುಷ್ಠಾನದಲ್ಲಿ ನಿಂತಿದೆ. ಈ ಸಮ್ಮೇಳನದ ಮುಖಾಂತರ ಸಂವಿಧಾನಾತ್ಮಕತೆಯ ಸವಾಲುಗಳು, ಸಂವಿಧಾನಗಳ ನೈತಿಕತೆಯು, ಪ್ರಜಾಪ್ರಭುತ್ವ ಹಾಗೂ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ಇತರೆ ವಿಷಯಗಳ ಕುರಿತು ಸೂಕ್ಷ್ಮ ಚರ್ಚೆಗಳಿಗೆ ವೇದಿಕೆ ಮಾಡಿಕೊಡಲಾಗಿದೆ.
ಸಮ್ಮೇಳನವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಉದ್ಘಾಟಿಸಲಿದ್ದಾರೆ.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಬಿ. ಕೋರೆ ಅಧ್ಯಕ್ಷೀಯ ನುಡಿಯನ್ನು ಆಡಲಿದ್ದಾರೆ.
ಈ ಸಮ್ಮೇಳನದ ಸಂವಾದಗಳಲ್ಲಿ ಪ್ರೊ. (ಡಾ.) ಕೆ. ವಿಕ್ರಮನ್ ನಾಯರ್, ಅಧ್ಯಕ್ಷರು, ಡಾ. ಅಂಬೇಡ್ಕರ್ ಚೇರ್, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ, ಕೇರಳ, ಪ್ರೊ. (ಡಾ.) ಸಂದೀಪ್ ಶಾಸ್ತ್ರಿ ಉಪಾಧ್ಯಕ್ಷರು, ನಿಟ್ಟೆ ಎಜುಕೇಶನ್ ಟ್ರಸ್ಟ್, ಬೆಂಗಳೂರು, ಪ್ರೊ. (ಡಾ.) ಕೆ.ಆರ್. ಐತಾಳ್, ಅತಿಥಿ ಪ್ರಾಧ್ಯಾಪಕರು, ಕೆ.ಎಲ್.ಇ. ಕಾನೂನು ಕಾಲೇಜು, ಬೆಂಗಳೂರು, ಪ್ರೊ. (ಡಾ.) ಸಿ. ರಾಜಶೇಖರ್, ಹಳೆಯ ಪ್ರಾಧ್ಯಾಪಕರು, ಪಿಜಿ ಕಾನೂನು ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ, ಈ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರ ಮಂಡಿಸಲಿದ್ದಾರೆ. ಈ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಉತ್ತಮ ಪ್ರಬಂಧ ಮಂಡಿಸುವವರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಾಧ್ಯಾಪಕಿ ಡಾ.ಉಮಾ ಹಿರೇಮಠ, ಪ್ರಾಧ್ಯಾಪಕಿ ಮತ್ತು ಕಾರ್ಯಕ್ರಮದ ಸಂಯೋಜಕಿ ಡಾ. ಸುಪ್ರಿಯಾ ಸ್ವಾಮಿ, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಅಮರಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.