ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸರ್ವ ಸಾಧಾರಣ ಸಭೆಯಲ್ಲಿ ಕರ್ನಾಟಕ ಪರವಾದ ನಿರ್ಣಯಗಳನ್ನು ಅಂಗೀಕರಿಸುವಂತೆ ಆಗ್ರಹಿಸಿ ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಆರಂಭಿಸಿರುವ ಆಂದೋಲನದ ಭಾಗವಾಗಿ ಕಿತ್ತೂರು ಕರ್ನಾಟಕ ಸೇನೆಯ ಯುವ ಘಟಕ ಮಂಗಳವಾರ ಮಹಾನಗರ ಪಾಲಿಕೆಯ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹನುಮಂತ ಕೊಂಗಾಲಿ ಅವರಿಗೆ ಮನವಿ ಸಲ್ಲಿಸಿತು.
ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶಿಗೀಹಳ್ಳಿ ಅವರ ನೇತೃತ್ವದಲ್ಲಿ ನಡೆದ ಇಂದಿನ ಧರಣಿ ಸತ್ಯಾಗ್ರಹಿಗಳು ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೇಯರ್ ಹಾಗೂ ಉಪ ಮೇಯರ್ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದರು.
2005 ರ ಅಕ್ಟೋಬರ್ 27 ರಂದು ಪಾಲಿಕೆಯ ಸಭೆಯಲ್ಲಿ ಮಹಾರಾಷ್ಟ್ರ ಪರವಾಗಿ ಅಂಗೀಕರಿಸಿದ ಗೊತ್ತುವಳಿಯನ್ನು ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟಿನ ಗಡಿ ವಿವಾದ ದಾವೆಯಲ್ಲಿ ಪೂರಕ ದಾಖಲೆಯನ್ನಾಗಿ ಬಳಸುತ್ತಿದೆ. ಇದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರಬಹುದಾಗಿದೆ. ಈಗ ಪಾಲಿಕೆಯಲ್ಲಿ ಕರ್ನಾಟಕ ಪರವಾಗಿರುವ ಸದಸ್ಯರ ಸಂಖ್ಯೆ 55 ಆಗಿರುವುದರಿಂದ ಕರ್ನಾಟಕದ ಪರವಾಗಿ ನಿರ್ಣಯಗಳನ್ನು ಅಂಗೀಕರಿಸಲು ಯಾವುದೇ ಅಡಚಣೆಗಳಿಲ್ಲ. ಆದ್ದರಿಂದ ಆದಷ್ಟು ಬೇಗ ಇಂತಹ ನಿರ್ಣಯವನ್ನು ಅಂಗೀಕರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಯುವ ಘಟಕ ಪಾಲಿಕೆಯ ಆಯುಕ್ತ ಎಂ. ಕಾರ್ತಿಕ ಅವರಿಗೆ ಮತ್ತೊಂದು ಮನವಿಯನ್ನು ಸಲ್ಲಿಸಿದ್ದು ಬೆಳಗಾವಿ ಮಹಾನಗರದ ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿತು


