ಬೆಳಗಾವಿ : ಬೆಳಗಾವಿ ಜಿಲ್ಲೆ ಮತ್ತೊಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ಕುಡಿದು ಗಲಾಟೆ ಮಾಡುವ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುಡಿದು ಬಂದು ಜಗಳವಾಡುತ್ತಿದ್ದ ಕಿರಿಯ ಮಗನನ್ನು ತಂದೆಯೇ ಹಿರಿಯ ಮಗನ ಜೊತೆ ಸೇರಿ ಹತ್ಯೆ ಮಾಡಿದ ಘಟನೆ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ. 25 ವರ್ಷದ ಮಂಜುನಾಥ ಉಳ್ಳಾಗಡ್ಡಿ ಕೊಲೆಯಾದವ.
ಕುಡಿದು ಬಂದು ನಿತ್ಯವೂ ತಂದೆ- ತಾಯಿ ಜೊತೆ ಮಂಜುನಾಥ ಜಗಳವಾಡುತ್ತಿದ್ದನಂತೆ. ಶನಿವಾರ ರಾತ್ರಿಯೂ ಕುಡಿದು ಬಂದು ತಂದೆ-ತಾಯಿಯೊಂದಿಗೆ ಜಗಳವಾಡುವಾಗ ತಂದೆ, ತಾಯಿ, ಅಣ್ಣ ಬುದ್ದಿವಾದ ಹೇಳಿದ್ದಾರೆ. ಆಗ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅಲ್ಲಿಯೇ ಇದ್ದ ಅಣ್ಣ ಗುರುಬಸಪ್ಪ, ತಂದೆ ನಾಗಪ್ಪರು ಮಂಜುನಾಥನ ಮೇಲೆ ಹಲ್ಲೆ ಮಾಡಿದ್ದು ಕೊನೆಗೆ ಸ್ಥಳದಲ್ಲಿಯೇ ಆತ ಮೃತಪಟ್ಟಿದ್ದಾನೆ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಕೊಲೆಯಾದವನ ನಿಶ್ಚಿತಾರ್ಥ ಸಹಾ ನಡೆದಿತ್ತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜಪ್ಪನ ಅಣ್ಣ ಗುರುಬಸಪ್ಪ ತಮ್ಮನ ಮದುವೆ ಮಾಡಲೆಂದು ಬಂದಿದ್ದನಂತೆ. ಆದರೆ ಕುಡಿತದ ದಾಸನಾಗಿದ್ದ ಮಂಜಪ್ಪ ಕುಡಿದು ಗಲಾಟೆ ಮಾಡುವ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ದಾರುಣ ಅಂತ್ಯವಾಗಿದೆ.